Sunday, April 26, 2015

ಭವ

ಮಧ್ಯಾಹ್ನದಿಂದಲೂ ಮಳೆಯ ಕಣ್ಣಾಮುಚ್ಚಾಲೆಯಾಟದಲ್ಲಿ ಕಾಮನಬಿಲ್ಲಿನ ಚಿತ್ತಾರಗಳ ಬಿಡಿಸಿ ಸುಸ್ತಾದ ಸೂರ್ಯ ಮೋಡಗಳ ಮರೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾನೋ ಎಂಬಂತೆ ಕವಿದಿದ್ದ  ಮಬ್ಬುಗತ್ತಲು. ಇಲ್ಲಾಡಿ ಬೇಸರಗೊಂಡ ಮೋಡಗಳು ಇನ್ನೆಲ್ಲೋ ಹಾರಿದಂತೆ ಸೂರ್ಯ ಆಗಸವನ್ನೇ ಪಟವನ್ನಾಗಿಸಿ ಬಿಡುವು ಕಳೆಯುತ್ತಿದ್ದ . ಹಳದಿ ಕೇಸರಿಗಳ ಚಿತ್ತಾರ ಬಿಡಿಸುತ್ತಿದ್ದ ರವಿ, ಹೊಗೆಯುಗುಳುತ್ತಿದ್ದ ಬಸ್ಸುಗಳು, ದಿನವಿಡೀ ಸುರಿದ ಮಳೆಯಿಂದ ತಂಪಾದ ದಾರಿಪಕ್ಕದ ಮರಗಳು, ಕೊಚ್ಚೆಯಿಂದ ಕಾಲಿಡಲೂ ಆಗದಂತಹ ರಸ್ತೆಯ ಇಕ್ಕೆಲಗಳು..ಬದುಕೂ ಹೀಗೆ ಅಲ್ಲವೇ ? ಚಂದವೆಂದುಕೊಂಡ್ರೆ ಚಂದ ಚಂದ. ಗೋಳೆಂದುಕೊಂಡ್ರೆ ಗೋಳೇ ಗೋಳು ! ಪ್ರಕೃತಿಗೆ ನೂರೆಂಟು ಬಣ್ಣಗಳಂತೆ. ಅದರಲ್ಲಿ ನೀ ನೋಡಬಯಸಿದ್ದೇ ಕಾಣೋದು ನಿಂಗೆ ಅಂತ ಯಾರೋ ಹೇಳಿದ ಮಾತ ನೆನಪಿಸಿ ಗೋಣಾಡಿಸುತ್ತಾ ತನ್ನ ಗಮ್ಯದತ್ತ ಸಾಗಿದನಾತ. ತನ್ನ ಪಾಡಿಗೆ ತಲೆಯಾಡಿಸಿಕೊಳ್ತಾ ಮುಂದೆ ಹೋಗೋ ಇವ ಹಾಡು ಕೇಳ್ತಾ ಇದಾನಾ ಅಂದ್ರೆ ಕಿವಿಗೊಂದು ಕರಿಬಳ್ಳಿಯಿಲ್ಲ . ಹುಚ್ಚ, ಭಿಕಾರಿಯಾ ಅನ್ನೋಕೆ ಗರಿಗರಿಯಾದ ಬಟ್ಟೆ ಬೇರೆ ಹಾಕಿದ್ದಾನೆ. ಮಾನಸಿಕ ? ಛೇ ಛೇ. ಇಲ್ಲದಿರಬಹುದು. ಯಾರಂತ ನೋಡೇ ಬಿಡೋಣ ಅನ್ನೋ ಕುತೂಹಲದಲ್ಲಿ ಸೂರ್ಯನೂ ಈಚೆ ಬರುವ ಹವಣಿಕೆಯಲ್ಲಿದ್ದಾನಾ ಎಂಬಂತೆ ಅಲ್ಲಲ್ಲಿ ಬಂಗಾರದ ಎಳೆಗಳು ಕಾಣುತ್ತಿದ್ದವು.

ಸಂಜೆ ಆರು ಆರೂಕಾಲಾಗಿದ್ದಿರಬಹುದು. ಆರೂವರೆಯೂ ಆದೀತೇನೋ. ಮುಳುಗುತ್ತಿರುವ, ಇನ್ನೂ ಮುಳುಗಿಲ್ಲದ ಸೂರ್ಯನ ಕಂಡರೆ ಏಳರ ಒಳಗೆ ಎಂದೂ ತಳ್ಳೋ ತಿಂಡಿಗಾಡಿಗಳ ಪಕ್ಕದಲ್ಲಿ ಸಮವಸ್ತ್ರದಲ್ಲಿ ನಿಂತಿದ್ದ ಜನರನ್ನು ನೋಡಿ ಐದರ ಆಫೀಸುಗಳು ಬಿಟ್ಟಾದ ಮೇಲಿನ ಸಮಯವೆಂದೂ ಯಾರಾದರೂ ಹೇಳಬಹುದಿತ್ತು. ದಪ್ಪ ದಪ್ಪ ಬ್ಯಾಗುಗಳ, ಮುಂಬಾಗಿದ ಹೊಟ್ಟೆಗಳ ಹೊತ್ತು ಕನ್ನಡಕಗಳ ಆಚೆಯಿಂದ ತಮಗಾಗಿ ತಯಾರಾಗುತ್ತಿರೋ ತಿಂಡಿಗಳನ್ನೇ ನೊಡುತ್ತಿರೋ ಯುವಕರು , ಸಂಜೆಯಾದರೂ ಮುಖ ಬಾಡದ ಸುಂದರಿಯರು, ತಿಂಡಿಗಳ ನೋಡಿ ಬಾಯಿ ಸೆಳೆದರೂ ತಮ್ಮ ದೇಹದ ನೆನಪಾಗಿ ಮುಂದೆ ಸಾಗುತ್ತಿರೋ ಲಲನೆಯರು, ನಗುಮೂಡದ ಆಂಟಿಯರು, ನಾಯಿಯೊಂದಿಗೆ ಒಂದು ಬುಕ್ಕನ್ನೂ ಹಿಡಿದು ವಾಕಿಂಗ್ ಹೊರಟ ಅಂಕಲ್ಗಳು ಆ ತಿಂಡಿಬೀದಿಯನ್ನು ಕಳೆಗಟ್ಟಿಸಿದ್ದರು. ಮಸಾಲೆಪುರಿ, ಗೋಬಿ, ನ್ಯೂಡಲ್ಸು, ದೋಸೆ, ಮಂಡಕ್ಕಿ, ಪಾವ್ಬಾಜಿಗಳ ಹಲವಿಧ ಕಾಂಬಿನೇಷನ್ನುಗಳು ದಿನಾ ತಿಂದರೂ ಮುಂದಿನ ದಿನಕ್ಕೆ ಮತ್ತೇನೋ ಇದೆಯೆಂಬ ಸವಿಯ ಸೆಳೆತದಲ್ಲಿ ಜನರನ್ನು ಹಿಡಿದಿಟ್ಟಿದ್ದವು. ಉಚ್ವಾಸ ನಿಚ್ವಾಸಗಳಂತೆ ಒಂದೆಡೆಯಿಂದ ಜನರನ್ನು ಹತ್ತಿಸಿಕೊಂಡು ಹೋಗುತ್ತಿದ್ದ ಬಸ್ಸುಗಳಾದರೆ ಮತ್ತೊಂದೆಡೆಯಿಂದ ಜನರನ್ನು ತಂದು ತಿಂಡಿ ಬೀದಿಯ ಬಳಿ ಹಾಕೋ ಬಸ್ಸುಗಳು. ಎಲ್ಲೋ ಹುಟ್ಟಿ, ಎಲ್ಲೋ ಸಾಗಿ ಮತ್ತೆಲ್ಲೋ ಅವಸಾನಗೊಳ್ಳೋ ಬಾಳ ಪಯಣದಂತೆ ಎಲ್ಲೆಲ್ಲಿಂದಲೋ ತಿಂಡಿ ಬೀದಿಗೆ ಬರುತ್ತಿದ್ದ ಜನರು ಮತ್ತಿನ್ಯಾವುದೋ ಸಂದುಗೊಂದಲಗಳಲ್ಲಿ ಮಾಯವಾಗುತ್ತಿದ್ದರೆ. ಮೂರು ಘಳಿಗೆಯ ಬಾಳಪಯಣದಲ್ಲಿ ತಿಂಡಿಬೀದಿಯೆಂಬೊಂದೊಂದು ತಂಗುದಾಣವಷ್ಟೆ. ಬರಿಯ ನಿಲ್ದಾಣವಲ್ಲವಿದು. ಆಕರ್ಷಕ ತಂಗುದಾಣ. ದೇಹಮನಗಳ ಸುಸ್ತುಮರೆಸಿ ಆಹ್ಲಾದವೀಯೋ ತಾಣ.. ಆ ತಂಗುದಾಣಕ್ಕೊಬ್ಬ ಹೊಸ ಪಯಣಿಗ ಹೊಕ್ಕುವವನಿದ್ದ ಇಂದು.

ಹತ್ತಾರು ಜನರ ಮಧ್ಯೆ ಹನ್ನೊಂದನೆಯವನೆಂಬಂತೆ ಹೊಕ್ಕವನ ಬಟ್ಟೆಯ ಬಗ್ಗೆಯಾಗಲಿ, ಬ್ಯಾಗ ಬಗ್ಗೆಯಾಗಲೀ, ಬ್ಯಾಗೊಳಗಿದ್ದಿರಬಹುದಾದ ವಸ್ತುಗಳ ಬಗ್ಗೆಯಾಗಲಿ ಅಲ್ಲಿದ್ದ ಯಾರಿಗೂ ಗಮನವಿದ್ದಿರಲಿಲ್ಲ. ತಯಾರಿಸೋ ಅಂಗಡಿಯವನಿಂದ ಖಾಲಿಯಾಗಿಸೋ ಹೊಟ್ಟೆಯವನವರೆಗೆ ಎಲ್ಲರಿಗೂ ತಮ್ಮ ಹೊಟ್ಟೆಯ ಚಿಂತೆಯಷ್ಟೆ. ಸಂಜೆಯ ಹೊತ್ತಿಗೆ ತಮ್ಮ ಪಕ್ಕದಲ್ಲೇ ತಿಂಡಿ ಬೀದಿಯಲ್ಲಿ ನಡೆದುಹೋಗುತ್ತಿರುವವನೊಬ್ಬ ಕಾಲೇಜು ವಿದ್ಯಾರ್ಥಿಯಾ, ಆಫೀಸಿನಿಂದ ಬಂದವನಾ ? ಕೆಲಸಕ್ಕೋಸ್ಕರ ದಿನಾ ಹುಡುಕುತ್ತಿರುವವನ ಎಂಬ ಪ್ರಶ್ನೆ ಅಲ್ಲಿದ್ದವರಿಗೆ ಕಾಡಿರೋ ಸಾಧ್ಯತೆ ಕಮ್ಮಿಯೇ. ನಿಯಮಿತವಾಗಿ ಬರೋ ಒಂದಿಷ್ಟು ಮುಖಗಳ ಪರಿಚಯವಿದ್ದಿರಬಹುದಾದರೂ ಎಂದೋ ಬರುವ ನೂರಾರು ಜನರನ್ನು, ಮೊದಲ ಬಾರಿಗೆ ಬರೋ ಗ್ರಾಹಕರನ್ನು, ಗ್ರಾಹಕರ ತರದಲ್ಲೇ ಬಂದಿರೋ ಭಯೋತ್ಪದಕನನ್ನು ಯಾವ ಅಂಗಡಿಯವನಾದರೂ ಹೇಗೆ ಗ್ರಹಿಸಿಯಾನು ? ಆಫೀಸವ್ನೇ ಆಗಿದ್ದನೆಂದರೂ ಆರರ ಹೊತ್ತಿಗೆ ಬಂದನೆಂದರೆ ಆಫೀಸಿಂದ ಬಂದನೋ, ಅಥವಾ ಆಫೀಸಿಗೆ ದಿನವಿಡೀ ರಜೆ ಹಾಕಿ ಬೇರೇನೋ ಮಾಡಿ ಈಗ ಮತ್ತಿಲ್ಲಿಗೆ ಬಂದನೋ ಎಂಬ ಸಂದೇಹಗಳು ಯಾರಿಗೆ ತಾನೆ ಸುಳಿದೀತು ಹೇಳಿ. ಅತನ ಬೆನ್ನಿನಲ್ಲಿದ್ದ ಬ್ಯಾಗೊಳಗೆ ಬಾಂಬೇನಾದ್ರೂ ಇದ್ದಿರಬಹುದೆಂದ ಊಹೆಯಂತೂ  ಖಂಡಿತಾ ಮೂಡಲು ಸಾಧ್ಯವಿರಲಿಲ್ಲ.

ಸ್ವರ್ಗದ ಆಸೆಯಿತ್ತಿದ್ದು ಹೌದು.ಸತ್ತರೆ ಕುಟುಂಬಕ್ಕೊಂದು ಆಸರೆಯೀವ ಭರವಸೆಯಿತ್ತಿದ್ದೂ ಹೌದು. ಬಾಂಬಿಡುವಷ್ಟು ದಿನವೂ ಕೈತುಂಬಾ ಕಾಸು, ಮನಸ್ಸಿಗೆ ಬಂದ ಜೀವನ ಎಂಬ ಕನಸ ಕಟ್ಟಿಸಿದ್ದ ಗೆಳೆಯನ ಮಾತುಗಳು ಒಮ್ಮೆ ಹೌದೆನ್ನಿಸಿದ್ದು ಸುಳ್ಳಲ್ಲ.  ಆದರೆ ಈ ನೆಲದಲ್ಲಿ ಬಾಂಬಿತ್ತರೆ ತನಗೆ ದಕ್ಕುವುದೇನು ? ತನ್ನ ಹುಟ್ಟಿದ ನೆಲವಲ್ಲವೇ ಇದು ? ಹುಟ್ಟಿದ ನೆಲ ! ? ಎಲ್ಲ ಬಣ್ಣಗಳ ಅಳಿಸಿ ಒಂದೇ ಬಣ್ಣ ಮಾಡಬೇಕೆನ್ನುವವ ಹೇಳುವುದು ನನ್ನ ಮೂಲ ನೆಲವಲ್ಲವೇ ? ಜೀವವೆಲ್ಲವೂ ದೇವನ ವರದಾನವೆಂಬೋ ಮಾತುಗಳ ನಂಬಲೇ ? ತಂದೆತಾಯಿಯರ ಕೋಶಗಳ ಸಮ್ಮಿಲನವೆಂಬೋ ವಿಜ್ನಾನವ ನಂಬಲೇ ? ಯಾವುದನ್ನು ನಂಬಿದರೂ ತನ್ನ ಮೂಲ ನೆಲವೆಂಬುದೆಲ್ಲಿ ? ತನ್ನನ್ನು ತಂದವರು ಇಳಿಸಿದ್ದೇ ನೆಲ. ಕಲಿಸಿದ್ದೇ ಭಾಷೆ. ಇತ್ತಿದ್ದೇ ತುತ್ತು. ಕೇಸರಿ, ಹಸಿರು, ಬಿಳಿಗಳ ಕಚ್ಚಾಟಗಳಲ್ಲಿ ಸ್ವರ್ಗದ ಪರಿಕಲ್ಪನೆಗಿಂತ ತೊಳೆಯದ ಟೋಪಿಗಳ ವಾಸನೆಯೇ ಹೊಡೆಯುತ್ತಿದೆಯಲ್ಲ ಇತ್ತೀಚೆಗೆ ? ಕಚ್ಚಾಟ ತಂದಿಕ್ಕೋ ಬಾಂಬುಗಳು ಕೊಡೋ ಬೆಚ್ಚನೆಯ ಇಂದಿಗಿಂತ ಅದೆಷ್ಟೇ ಅವ್ಯವಸ್ಥೆಗಳ ತವರೆಂಬ ದೇಶದಲ್ಲೂ ಇರಬಹುದಾದ ಬೆಳಕ ಕಿರಣ ಹುಡುಕಿ ಹೊರಡುವುದೇ ಮೇಲಾ ? ತಿಂಡಿ ಬೀದಿಯಲ್ಲಿ ಹೊಟ್ಟೆ ತುಂಬಾ ಸಿಗಬಹುದಾಗಿದ್ದ  ,ತನ್ಮೂಲಕ ತನ್ನ ದಾಸ್ಯಕ್ಕೆ ತಳ್ಳಬಹುದಾಗಿದ್ದ ಗೋಬಿ ನ್ಯೂಡಲ್ಸನ್ನ ಧಿಕ್ಕರಿಸಿ ಮುಂದೆ ನಡೆದಿದ್ದವನಿಗೆ ಈಗ ತಿಂಗಳೆರಡಾದರೂ ಎರಡು ಹೊತ್ತಿನ ಊಟಕ್ಕೆ ಗತಿಯಿಲ್ಲದ ಪರಿಸ್ಥಿತಿ. ಪ್ರತಿ ದಿನಾ ಇಸ್ತ್ರಿಯಾದ ಬಟ್ಟೆಯ ಕಾಣುವವರಿಗೆ ಹೊಸ ಊರ ಹೆಂಗೋ ಹೊಕ್ಕವನ ಬಳಿಯಿರೋ ಮೂರೇ ಜೊತೆ ಬಟ್ಟೆಗಳೇ ಮತ್ತೆ ಮತ್ತೆ ಗರಿಯಾಗುತ್ತಾ ದಿನಗಳೆಯುತ್ತಿರೋದು, ಹೊಟ್ಟೆಪಾಡಿಗೊಂದು ಕೆಲಸವರೆಸುತ್ತಾ ಕಾಲ ತಳ್ಳುತ್ತಿವೆಯೆಂಬ ಸತ್ಯ ಎಲ್ಲಿ ಗೋಚರಿಸಬೇಕು. ಎಲ್ಲೋ ಬಾಂಬ್ ಮೊಳಗಿದ ಸದ್ದಾದಾಗೆಲ್ಲಾ , ತಿಂಡಿ ಬೀದಿಯ ಬಳಿ ಹಸಿದ ಹೊಟ್ಟೆಯಲ್ಲಿ ಸಾಗಿದಾಗೆಲ್ಲಾ ತಿಂಗಳೆರಡರ ಹಿಂದೆ ನಡೆದ ಮಾತುಕತೆ ನೆನಪಾಗುತ್ತೆ. ಸಿಗದ ಉತ್ತರಗಳನರಸುತ್ತಾ ಹಿಡಿದ ಹಾದಿಯಲ್ಲಿ ಇಂದಲ್ಲಾ ನಾಳೆಯೊಂದು ಆಶಾಕಿರಣ ಕಾಣೋ ಭರವಸೆ ಮೂಡಿಸಿಕೊಳ್ಳುತ್ತಾ ಹೆಜ್ಜೆಗಳು ಮುಂದೆ ಸಾಗುತ್ತೆ.

ಈ ಲೇಖನ "ಪಂಜು"ವಿನಲ್ಲಿ ಪ್ರಕಟವಾಗಿದೆ

Monday, April 13, 2015

ಲಿನಕ್ಸ್ install ಮಾಡೋದು ಹೇಗೆ ?:

ಕಂಪ್ಯೂಟರನ್ನು ಹೆಚ್ಚೆಚ್ಚು ಬಳಸೋರಿಗೆ ಲಿನಕ್ಸೆನ್ನೋದು ಪರಿಚಿತವಾದ್ರೂ ಹೊಸದಾಗಿ ಬಳಸೋರಿಗೆ ಅದ್ರ ಬಗ್ಗೆ ಇಲ್ಲದ ಭಯ ಇರ್ಬೋದು.ಏ ಲಿನಕ್ಸು ಸಿಕ್ಕಾಪಟ್ಟೆ ಕಷ್ಟ ಮಾರಾಯ, ಎಲ್ಲದಕ್ಕೂ ಕಮಾಂಡ್ ಕೊಡ್ತಾ ಕೂರ್ಬೇಕು ಅಂತ ಓಬಿರಾಯನ ಕಾಲದಲ್ಲಿ ಯಾರೋ ಹೇಳಿದ್ದನ್ನೇ ನಂಬಿಕೊಂಡು ಕೂರೋರು ಅದ್ರಲ್ಲಿ ಎಷ್ಟು ಪ್ರತಿಶತ ಸತ್ಯವಿದೆ ಅಂತ ಪರೀಕ್ಷಿಸಲೂ ಹೋಗೋಲ್ಲ. ಕಂಪ್ಯೂಟರ್ ಕೊಳ್ಳುವಾಗ ಕೆಲವೇ ಕೆಲವು ಕಂಪ್ಯೂಟ್ರುಗಳ ಜೊತೆಗೆ ಮಾತ್ರ ಒರಿಜಿನಲ್ ವಿಂಡೋಸ್ ಬರುತ್ತೆ. ಉಳಿದಿದ್ದೆಲ್ಲಾ ಪೈರೇಟೆಡ್ ಅಥವಾ ಕಳ್ಳಮಾಲು ! ಚೈನಾ ಬಜಾರ್ಗೆ ಹೋಗಿ ಒಂದು ಕಳ್ಳಮಾಲಿನ ಶರ್ಟೋ ಪ್ಯಾಂಟೋ ಕೊಂಡು ಹಾಕೋದು ಹೇಗೋ ಹಾಗೆಯೇ ಪೈರೇಟೆಡ್ ವಿಂಡೋಸ್ ಬಳಸೋದೂ ಕೂಡ !! ಅದ್ರ ಬದ್ಲು ತನ್ನ ಪ್ರತಿಯೊಂದು ಅಂಶದ ತಂತ್ರಾಂಶವನ್ನೂ ಜಗತ್ತಿಗೆ ಮುಕ್ತವಾಗಿ ತೆರೆದಿಡುವ(open source) ತಂತ್ರಾಂಶಗಳ ಬಳಕೆ ಹೆಚ್ಚೆಚ್ಚು ಪ್ರೋತ್ಸಾಹಿಸೋದು ಪ್ರಜ್ನಾವಂತ ಕಂಪ್ಯೂಟರ್ ಬಳಕೆದಾರರಾದ ನಮ್ಮೆಲ್ಲರ ಕರ್ತವ್ಯ. ಆ ನಿಟ್ಟಿನಲ್ಲಿ ಮೊದಲ ಹೆಜ್ಜೆ ನಮ್ಮ ಕಂಪ್ಯೂಟ್ರಲ್ಲಿ ಲಿನಕ್ಸ್ ಹಾಕಿಕೊಳ್ಳೋದು.ಇದ್ದ ವಿಂಡೋಸನ್ನು ತೆಗೆದು ಲಿನಕ್ಸನ್ನು ಹಾಕೋ ಬಗ್ಗೆ ಹೇಳ್ತಾ ಇಲ್ಲ ಇಲ್ಲಿ. ವಿಂಡೋಸ್ ಜೊತೆ ಜೊತೆಗೇ ಲಿನಕ್ಸನ್ನು ಹಾಕೋ ಬಗ್ಗೆ ಹೇಳ್ತಾ ಇರೋದು.

೧.ಪೂರ್ವ ತಯಾರಿ:
ಅ.ಲಿನಕ್ಸಲ್ಲಿ ಹಾಕೋಕೆ ಎಷ್ಟು ಜಾಗ ಬೇಕು? :
 ಹಲವು ವಿಧ. ಮಿಂಟ್ os ಅನ್ನು ಪೆನ್ ಡ್ರೈವ್ ಜೊತೆಗೆ ಎಲ್ಲಿ ಬೇಕಾದ್ರೂ ಕೊಂಡೊಯ್ದು ಪೆನ್ ಡ್ರೈವಿನಿಂದಲೇ os ಮಾಡೋ ಎಲ್ಲಾ ಕೆಲಸಗಳನ್ನು ಮಾಡಬಹುದಾದರೂ, ಸುಧಾರಿತ ತಂತ್ರಾಂಶಗಳನ್ನು ಹಾಕಲು ನಾಲ್ಕರಿಂದ ೬ ಜಿ.ಬಿ ಜಾಗ ಸಾಕು. ಹಾಗಾಗಿ ಒಂದು ಹದಿನೈದು ಜಿ.ಬಿಯ ಖಾಲಿ ಡ್ರೈವ್ ಇದ್ದರೆ ಸಾಕು, ಅದರಲ್ಲಿ ಲಿನಕ್ಸ್ ಹಾಕಬಹುದು.

ಆ.ನನ್ನ ಕಂಪ್ಯೂಟ್ರಲ್ಲಿ ಒಂದೇ ಡ್ರೈವ್ ಇದೆ. ಅದರಲ್ಲಿ ಕಂಪ್ಯೂಟ್ರ ಜೊತೆಗೆ ಬಂದ ಒರಿಜಿನಲ್ ವಿಂಡೋಸ್ ಇದೆ. ಅದನ್ನು ಹಾಳು ಮಾಡಿಕೊಳ್ಳಲು ಇಷ್ಟ ಇಲ್ಲ. ಹಾಗಾದ್ರೆ ಲಿನಕ್ಸ್ ಹಾಕೋದು ಹೇಗೆ?
ಇಲ್ಲಿ ಎರಡು ಆಯ್ಕೆಗಳಿವೆ.
ಒಂದು: vmware ಅಂತ ಇನ್ಟಾಲ್ ಮಾಡಿಕೊಂಡು, ಅದ್ರ ಮೇಲೆ ಲಿನಕ್ಸ್ ಹಾಕಬಹುದು.ಇದು ಒಂದು os ಒಳಗೆ ಮತ್ತೊಂದು os ನ ಕೂರಿಸೋ ವಿಧಾನ. ಹಾಗಾಗಿ ಸ್ವಲ್ಪ ನಿಧಾನವಾಗಿ ನಡೆಯುತ್ತೆ ಮತ್ತು ಹೆಚ್ಚು RAM ಬೇಕು
ಎರಡು: ನಿಮ್ಮ ಕಂಪ್ಯೂಟರ್ ಐಕಾನ್ ಮೇಲೆ ಬಲ ಕ್ಲಿಕ್ ಮಾಡಿ.ಅದರಲ್ಲಿ storage > Disk management ಗೆ ಹೋದ್ರೆ ಅದರಲ್ಲಿ ನಿಮ್ಮ ಡಿಸ್ಕುಗಳು ತೋರಿಸುತ್ತವೆ. ಇದರಲ್ಲಿ ನಿಮ್ಮ ಡ್ರೈವಿನ ಮೇಲೆ ಕ್ಲಿಕ್ ಮಾಡಿ shrink volume ಅಂತ ಕೊಟ್ಟು, ನಂತರ ೧೫ ಜಿ.ಬಿ ಅಂತ ಕೊಟ್ರೆ ೧೫ ಜಿ.ಬಿ.ಯಷ್ಟು ಖಾಲಿ ಜಾಗ ಸೃಷ್ಟಿಯಾಗುತ್ತೆ. ನಂತರ ಆ ಖಾಲಿ ಜಾಗ(un allocated free space) ಮೇಲೆ ಕ್ಲಿಕ್ ಮಾಡಿ create logical volume ಅಂತ ಕೊಟ್ರೆ ಆಯ್ತು. ಹೊಸದೊಂದು ಡ್ರೈವ್ ರೆಡಿಯಾಗುತ್ತೆ. ಆದನ್ನ ನಂತರ ಲಿನಕ್ಸ್ ಹಾಕಲು ಬಳಸಬಹುದು. ನಿಮ್ಮ ಬಳಿ ಮೂರ್ನಾಲ್ಕು ಡ್ರೈವ್ಗಳಿದ್ದು ಯಾವುದೂ ಖಾಲಿಯಿಲ್ಲದಿದ್ದರೆ, ಹಿಂಗೇ ಒಂದು ಖಾಲಿ ಜಾಗ ಸೃಷ್ಠಿಸಿ, ಅದರಲ್ಲಿ ಹೊಸ ಡ್ರೈವ್ ಮಾಡಿ ಅದರಲ್ಲಿ ಲಿನಕ್ಸನ್ನು ಇನಸ್ಟಾಲ್ ಮಾಡಬಹುದು.

1. Creating one of the/only drive to create free space for linux installation


ಇ. ಲಿನಕ್ಸ್ ಡಿ.ವಿಡಿ:
ಲಿನಕ್ಸ್ ಇನ್ಸಸ್ಟಾಲ್ ಮಾಡಲು ಬೇಕಾದ ಮತ್ತೊಂದು ವಸ್ತು ಲಿನಕ್ಸ್ ಡಿವಿಡಿ. ನಿಮ್ಮ ಹತ್ರ ಅದಿದ್ರೆ ಓಕೆ. ಇಲ್ಲದಿದ್ರೆ ಚಿಂತೆಯಿಲ್ಲ. ಲಿನಕ್ಸ್.ಆರ್ಗ್ ಜಾಲತಾಣದಿಂದ ಹೊಸಾ ಲಿನಕ್ಸನ್ನ ಡೌನ್ ಲೋಡ್ ಮಾಡಿ ಅದನ್ನ ಇನಸ್ಟಾಲ್ ಮಾಡಲು ಉಪಯುಕ್ತವಾಗುವಂತಹ ರೂಪದಲ್ಲಿ( bootable image) ಆಗಿ ಒಂದು ಡಿವಿಡಿಗೆ ಬರೆದ್ರಾಯ್ತು. bootable image ನ ಬರೆಯೋದಕ್ಕೇ ಅಂತ poweriso ಮುಂತಾದ ಹಲವಾರು ತಂತ್ರಾಂಶಗಳಿವೆ.
creating linux DVD using power ISO


ಈ:ಇನ್ಸ್ಟಾಲ್ ಮಾಡೋ ಸಂದರ್ಭದಲ್ಲಿ ಇಂಟರ್ನೆಟ್ ಇದ್ರೆ ಓಕೆ, ಇಲ್ಲದಿದ್ರೂ ತೊಂದ್ರೆ ಇಲ್ಲ
೨. ಇನ್ ಸ್ಟಾಲ್ ಮಾಡೋಕೆ ಶುರು:
ಲಿನಕ್ಸ್ನ ಡಿವಿಡಿ ಹಾಕಿ, ಕಂಪ್ಯೂಟರ್ನ restart ಮಾಡಿ f12 ಕೀಲಿ ಒತ್ತಿದ್ರೆ ಡಿವಿಡಿ, ಹಾರ್ಡ್ ಡಿಸ್ಕ್, ಸಿ.ಡಿ ಹೀಗೆ ಹಲವಾರು ವಿಧಗಳಲ್ಲಿ ಯಾವುದರಿಂದ ಕಂಪ್ಯೂಟರನ್ನು ಚಾಲೂ ಮಾಡಬೇಕು ಎಂಬ ಆಯ್ಕೆ ಸಿಗುತ್ತೆ. ಅದ್ರಲ್ಲಿ DVD ಅಂತ ಕೊಡಿ.ಡಿ.ವಿಡಿ ಅನ್ನೋ ಆಯ್ಕೆ ಬರಲಿಲ್ಲ ಅಂದ್ರೆ ಇನ್ನೊಂದೇ ಒಂದು ಸಣ್ಣ ಹೆಜ್ಜೆಯಿದೆ. ಆದ್ರೆ ಈಗ ಬರ್ತೀರೋ ಹೊಸ ಕಂಪ್ಯೂಟರ್ಗಳಲ್ಲಿ ಆ ಸಮಸ್ಯೆಯೇ ಇಲ್ಲದ್ದರಿಂದ ಆ ಹಂತವನ್ನಿಲ್ಲಿ ಬರೆಯುತ್ತಿಲ್ಲ. ಯಾರಿಗಾದರೂ ಆ ಸಮಸ್ಯೆ ಬಂದ್ರೆ ಖಂಡಿತಾ ತಿಳಿಸಿ, ಆ ಹಂತದ ಬಗ್ಗೆ ಉತ್ತರಿಸುತ್ತೇನೆ.
2. Choose boot from DVD after hitting F12


೩. ಡಿವಿಡಿ ಹಾಕಿದ ಮೇಲೆ ಒಂದಿಷ್ಟು ಚಿತ್ರ ಚಿತ್ತಾರಗಳು ಬರುತ್ತಾ ಹೋಗುತ್ತೆ. ಆ ಚಿತ್ರಗಳೇ ಏನು ಮಾಡಬೇಕಂತ ಹೇಳುತ್ವೆ. ಇಲ್ಲಿ ಬರೋ ಒಂದೇ ಒಂದು ಮುಖ್ಯವಾದ ಘಟ್ಟ ಅಂದ್ರೆ ಲಿನಕ್ಸನ್ನ ಎಲ್ಲಿ ಹಾಕ್ಬೇಕು ಅಂತ ಆಯ್ಕೆ ಮಾಡೋದು. 
ಅ)use whole disk ಅಂತ ಕೊಟ್ರೆ ಈಗಿರೋ ವಿಂಡೋಸ್ ಅಳಿಸಿ ಇಡೀ ಹಾರ್ಡ್ ಡಿಸ್ಕಿನಲ್ಲಿ ಲಿನಕ್ಸ್ ಕೂರುತ್ತೆ. ಇದು ತುಂಬಾ ಅಪಾಯಕಾರಿಯಾದ್ದರಿಂದ ಇದನ್ನು ಕೊನೆಯಲ್ಲಿ ಕೊಟ್ಟಿರುತ್ತಾರೆ.
ಆ)upgrade existing linux: ಈಗ ನಿಮ್ಮ ಬಳಿ ಯಾವುದಾದರೂ ಲಿನಕ್ಸ್ ಇದ್ದರೆ, ಅದನ್ನು ಉನ್ನತೀಕರಿಸಲು ಈ ಆಯ್ಕೆ ಬಳಸಬಹುದು.
ಇ)clean the selected disk and install linux:ಈಗ ಇರೋ ಒಂದು ಡ್ರೈವಿನಲ್ಲಿ(ಲಿನಕ್ಸೋ, ವಿಂಡೋಸೋ ಏನಾದ್ರೂ ಇರ್ಲಿ)ರೋ ಮಾಹಿತಿ ಅಳಿಸಿ , ಅಲ್ಲಿ ಲಿನಕ್ಸ್ ಹಾಕೋಕೆ ಇದ್ನ ಉಪಯೋಗಿಸಬಹುದು.
9. Choose Upgrade or erase earlier linux option.


3. Choose to install Linux
4. If you have internet connection and want to download latest updates during installation, choose "connect to this network" or else choose "I don't want to connect to wi-fi"
 ಇನ್ನು ಮುಂದಿನ ಹಂತಗಳ ಬಗ್ಗೆ ಬರೆಯೋದಕ್ಕಿಂತ ನಾನು ಇನ್ಸ್ಟಾಲ್ ಮಾಡಿದ ಚಿತ್ರಗಳನ್ನೇ ಹಾಕುತ್ತಿದ್ದೇನೆ. ಇದರಿಂದ ಉಪಯೋಗವಾಗಬಹುದೆಂಬ ನಂಬಿಕೆಯಲ್ಲಿ.. ಅಂದಾಗೆ ಫ್ರೀಯಿದ್ದಾಗ ಪ್ರಯತ್ನಿಸಿ. ಎಲ್ಲಾದ್ರೂ ಸಿಕ್ಕಾಕ್ಕೊಂಡ್ರೆ ಅದ್ರ ಬಗ್ಗೆ ತಿಳಿಸಿ, ಮುಂದಿನ ಓದುಗರಿಗೆ ಉಪಯೋಗವಾದೀತು ;-)
5. Minor errors like this during installation can be ignored and installation can be resumed
6. Home screen of the installer. Choose install Linux

7. Choose the language for installed. In some versions of linux like Fedora, you can choose Kannada as well

8. Conditions to be checked before starting the installer
10. you can use windows partion manager to create disk and use that during installation or jut create free space and use that during linux installation to create drive( and optional swap space as in next step)

11. You can create SWAP space of around 1GB or 500 MB which can act as virtual RAM for the linux being installed(this is optional.Ignore if you have more RAM)
12. Choose drive/Free space where you want to install Linux

13. Confirm the disk where linux is being installed

14. Choose the timezone

15. Select the language for the linux system

16. Set up Admin username/password

17.Installation is going on
18. Some minor errors like above are OK

19. Once installation is done, reboot the PC/Laptop
20. After installing Linux, you can access both Linux, windows drives from linux

Friday, April 10, 2015

ಬಿದರ್ತಳ, ಜಾಪ್ರಾಸಿ ಬೆಟ್ಟ, ಕೊಡೆಗಲ್ಲು ಸುತ್ತಣ ಬೆಟ್ಟಗಳ ಚಾರಣ -ಭಾಗ ೧

View from Japrasi Durga during Bidartala trekking
ಪೀಠಿಕೆ:
ಈ ಭಾನುವಾರ ವಿಸ್ಮಯ ಪ್ರತಿಷ್ಠಾನದಿಂದ ಬಿದರ್ತಳಕ್ಕೆ ಟ್ರೆಕ್ಕಿಂಗ್ ಹೋಗ್ತಾ ಇದಾರೆ . ಬರ್ತೀಯ ?ಅಂತ ನಮ್ಮ ಗಿರಿ ಭಾಯ್ ಮೆಸೇಜ್ ಹಾಕಿದ್ರು ಹಿಂಗೇ ಒಂದಿನ. ಮೂಡಿಗೆರೆಗೆ ಹತ್ರವಿರೋ ಕೊಟ್ಟಿಗೆಹಾರದಲ್ಲಿ ವಿಸ್ಮಯ ಪ್ರತಿಷ್ಠಾನ ಅಂತಿದೆ. ಅವ್ರು ಹೀಗೇ ಚಾರಣಗಳನ್ನು ಆಯೋಜಿಸ್ತಾರೆ. ಪೂರ್ಣಚಂದ್ರ ತೇಜಸ್ವಿಯವರ ಒಡನಾಡಿಗಳು, ಅವರ ಪುಸ್ತಕ ಪ್ರೇಮಿಗಳು ಸುಮಾರು ಜನ ಬರ್ತಾರೆ ಇದಕ್ಕೆ. ಚೆನ್ನಾಗಿರತ್ತೆ ಅಂತ ಹಿಂದೊಮ್ಮೆ ಗಿರಿ ಭಾಯೇ ಸಣ್ಣದಾಗೊಂದು intro ಕೊಟ್ಟಿದ್ದ ನೆನಪು. ಹಿಂದಿನ ಸಲ ಏನೋ ಮಾಡಿ ತಪ್ಪಿಸ್ಕೊಂಡಿದ್ದೋನು ಈ ಸಲ ಹೊರಡ್ಲೇಬೇಕು ಅನ್ನೋ ಇರಾದೆಯಿಂದ ಬಾಪು ದಿನೇಶ್ರವರಿಗೆ ಫೋನ್ ತಿರುಗಿಸಿದೆ. ಹಿಂದಿನ ಸಲದಂತೆ ಈ ಸಲವೂ ಲೈನ್ ಸಿಗ್ಬಾರ್ದೇ ? ಬಿಡತ್ಲಗೆ, ಅದೃಷ್ಟವಿಲ್ಲ ಅಂತಂದ್ಕೊಳ್ಳೋ ಹೊತ್ತಿಗೆ ಅವ್ರೇ ಫೋನಾಯಿಸಿದ್ರು. ಚಾರ್ಮಾಡಿಯ ಮಡಿಲಲ್ಲಿ ಚಾರಣಕ್ಕೆ ಹೊರಟ ಐವತ್ತು ಚಿರ್ಲೆ ಜನರ ಲಿಸ್ಟಿಗೆ ಮತ್ತೊಂದು ಹೆಸ್ರು ಸೇರ್ಕೊಂಡ್ತು :-)

ಬಿದರ್ತಳ ಎಲ್ಲಿ ಮತ್ತು ಹೋಗೋದು ಹೇಗೆ ಅಂದ್ರಾ ?
ಅದೇ ವಿಷ್ಯಕ್ಕೆ ಬರ್ತಾ ಇದೀನಿ. ಬಿದರ್ತಳ ಅನ್ನೋದು ಚಾರ್ಮಾಡಿ ಘಾಟಿಯ ಬುಡದಲ್ಲಿರೋ ಏಳೆಂಟು ಕುಟುಂಬಗಳಿರೋ ಒಂದು ಹಳ್ಳಿ. ಚಾರ್ಮಾಡಿ ಘಾಟಿಯ ಬುಡದಲ್ಲಿರೋ ಆಲೇಖಾನ್ ಅನ್ನೋ ಸ್ಥಳದಿಂದ ಇಲ್ಲಿಗೆ ಟ್ರೆಕ್ಕಿಂಗ್ ಶುರುವಾಗುತ್ತೆ. ಒಂದಿಷ್ಟು ದೂರ ಜೀಪ್ ಹೋಗುತ್ತೆ. ಅಲ್ಲಿಂದ ಟ್ರೆಕ್ಕಿಂಗು. ಅಂದಾಗೆ ನಮ್ಮ ಟ್ರೆಕ್ಕಿಂಗ್ ಶುರುವಾಗೋದು ಕೊಟ್ಟಿಗೆಹಾರದಿಂದ ಭಾನುವಾರ ಬೆಳಗ್ಗೆ ಎಂಟಕ್ಕೆ ಅಂತ ಹೇಳಿದ್ರು ವಿಸ್ಮಯ ಪ್ರತಿಷ್ಟಾನದವ್ರು. ಮೂಡಿಗೆರೆಯಿಂದ ಧರ್ಮಸ್ಥಳಕ್ಕೆ ಹೋಗೋ ರಸ್ತೆಯಲ್ಲಿ, ಹೊರನಾಡು, ಶಿವಮೊಗ್ಗದ ಕಡೆಯಿಂದ ಬರೋ ರಸ್ತೆ ಸೇರಿಕೊಳ್ಳೋ ಸ್ಥಳವೇ ಕೊಟ್ಟಿಗೆಹಾರ. ಪೂಚಂತೆಯವ್ರ ಜುಗಾರಿ ಕ್ರಾಸ್ ಕಾದಂಬರಿ ಈ ಸ್ಥಳಕ್ಕೆ ಸಂಬಂಧಪಟ್ಟಿದ್ದೇ ಎಂದು ಹಿರಿಯರೊಬ್ರು ಹೇಳುತ್ತಿದ್ದ ನೆನಪು. ಇರ್ಲಿ, ಕೊಟ್ಟಿಗೆಹಾರದಲ್ಲೇ ವಿಸ್ಮಯ ಪ್ರತಿಷ್ಟಾನದ ಆಫೀಸೂ ಇರೋದು. ನೀವು ರಾತ್ರೆಯೇ ಇಲ್ಲಿ ಬಂದು ಉಳ್ಕೋಬೋದು. ಇಲ್ಲಾ ಬೆಳಗ್ಗೆ ಮುಂಚೆ ಬಂದ್ರೆ ಸ್ವಲ್ಪ ವಿಶ್ರಾಂತಿ ತಗೊಂಡು ಟ್ರೆಕ್ಕಿಂಗಿಗೆ ರೆಡಿಯಾಗ್ಬೋದು ಅಂತ ತಿಳಿಸಿದ್ರು ಆಯೋಜಕರು. ಸರಿ ಅಂತ ಭಾನುವಾರ ರಾತ್ರೆ ಹೊರನಾಡಿನ ಬಸ್ಸು ಹತ್ತಿದ ನಾನು, ಗಿರಿ, ಅಮೃತ ಅವ್ರು ಮತ್ತವರ ತಂಗಿ ಗಾಯತ್ರಿ ಕೊಟ್ಟಿಗೆಹಾರ ತಲುಪೋ ಹೊತ್ತಿಗೆ ಬೆಳಗ್ಗೆ ನಾಲ್ಕಾಗಿತ್ತು. ವಿಸ್ಮಯ ಪ್ರತಿಷ್ಟಾನದ ಆಫೀಸಲ್ಲಿ ಸವಿನಿದ್ರೆಯಲ್ಲಿದ್ದ ಗೆಳೆಯ ದೀಪಕ್ನನ್ನ ಎಬ್ಬಿಸಿ ನಮಗಾಗೇ ಕಾಯುತ್ತಿದ್ದ ಸ್ಲೀಪಿಂಗ್ ಬ್ಯಾಗ್ ಹೊಕ್ಕೆವು ಅನ್ನೋ ಅಲ್ಲಿಗೆ ಒಂದು ಉಪಕತೆಯ ಮುಕ್ತಾಯ.

 ಸೂರ್ಯೋದಯ:
ಏ, ಇಲ್ಲಿನ ಫೋಟೋ ತೆಗಿಬೇಕು ಅಂತ ಬೆಳಬೆಳಗ್ಗೆನೇ ಆ ಕತ್ಲಲ್ಲೂ ಹೇಳಿದ ನಂಗೆ, ಸ್ವಲ್ಪ ತಡ್ಯಪ್ಪ, ಇಲ್ಲಿಯ ಸೂರ್ಯೋದಯದ್ದು ತೆಗಿ. ಇಲ್ಲಿನ ಸೂರ್ಯೋದಯ ಸೂಪರ್ರಾಗಿರುತ್ತೆ ಕಣೋ ಎಂದಿದ್ರು ಗಿರೀಶ್. ನಿದ್ರೆ ಮಾಡ್ಬಿಟ್ರೆ ಅವ್ರು ಹೇಳಿದ ಸೂಪರ್ ಸೂರ್ಯೋದಯ ಮಿಸ್ಸಾಗಿ ಬಿಡತ್ತೆ ಅನ್ನೋ ಗಾಬ್ರಿಗೋ ಹೊಸ ಪರಿಸರವಾಗಿದ್ದಕ್ಕೋ ಏನೋ ನಿದ್ರೇನೆ ಬರ್ಲಿಲ್ಲ. ಕಿಟಕಿಯಿಂದ ಚೂರ್ಚೂರೇ ಬೆಳಕು ಬರತೊಡಗಿದಂಗೆ ಸೂರ್ಯೋದಯ ಆಯ್ತಾ ಅಂತ ಸ್ಲೀಪಿಂಗ್ ಬ್ಯಾಗ್ ಸಮೇತ ಎದ್ದು ನೋಡೋಕೆ ಪ್ರಯತ್ನ ಮಾಡ್ದೆ ! ಇನ್ನೂ ಆಗಿಲ್ಲ ಅಂತ ಮತ್ತೆ ಮಲಗೋಕೆ ಪ್ರಯತ್ನ ಮಾಡಿದ್ರೂ ನಿದ್ರೆ ಬರ್ಲಿಲ್ಲ. ಹಿಂಗೇ ಮೂರ್ನಾಲ್ಕು ಪ್ರಯತ್ನ ಮಾಡೋ ಹೊತ್ತಿಗೆ ದೀಪಕ್ ಹೊರಹೊರಟ್ರಲ್ಲ ಅಂತ ಮತ್ತೆ ಕಿಟಕಿಯಲ್ಲಿ ಹಣುಕಿದ್ರೆ ಸೂರ್ಯನೂ ಬೆಟ್ಟಗಳ ಮರೆಯಿಂದ ತಲೆ ಹಾಕ್ತಾ ಇದ್ದಾನೆ ! ತಗೋ ಅಂತ ಕ್ಯಾಮರಾ ತೆಗ್ದು, ಅದ್ರಲ್ಲಿ ಸರಿ ಬರ್ದೇ ಇದ್ರೆ ಇರ್ಲಿ ಅಂತ ಮೊಬೈಲ್ನೂ ಜೀಬಿಗೆ ಸಿಕ್ಕಿಸ್ಕೊಂಡು ಹೊರಗೋಡಿದ್ದೇ.

See the face formed from the branches of tree during Sunrise at Kottigehara

ಬೆಟ್ಟಗಳ ಮರೆಯಿಂದ ಮೂಡ್ತಿರೋ ಭಾಸ್ಕರ, ಮರಗಳ ಮರೆಯಲ್ಲಿ ಹಲವು ಆಕಾರಗಳ ಮೂಡಿಸ್ತಿದ್ದ ರವಿ.. ಹೀಗೆ ಹಲವು ಫೋಟೋಗಳಿಗೆ ಮದುವೆ ಮನೆಯಲ್ಲಿ ಮದುಮಕ್ಕಳು ಪೋಸ್ ಕೊಟ್ಟಂಗೆ ಕೊಡ್ತಾ ಇದ್ದನಾ ಸೂರ್ಯ. ಅದೊಂದಿಷ್ಟು ತೆಗ್ಯೋ ಹೊತ್ತಿಗೆ, ರೆಡಿಯಾಗ್ಬೇಕಲ್ಲ ಅಂತ ನೆನ್ಪಾಯ್ತು. ವಾಪಾಸ್ ಒಳಬಂದು ಪ್ರಾತಃಕರ್ಮಗಳನ್ನು ಮುಗಿಸಿ ಹೊರಡೋ ಸಮಯಕ್ಕಾಗಿ ಕಾಯತೊಡಗಿದ್ವಿ.

ತಿಂಡಿ:
ಏಳೂವರೆಯಾಗ್ತಾ ಬಂತು. ತಿಂಡಿ ಯಾವಾಗ ಬರ್ಬೋದು ಅಂತ ನೋಡ್ತಿದ್ದೋರಿಗೆ ಆಶ್ಚರ್ಯ. ಬರಲ್ಲ ಅಂದಿದ್ದ ಭಾಗ್ಯಮ್ಮ ಮತ್ತವಳ ಗೆಳತಿ ವಿದ್ರುಮ ಹಾಜರ್ ಆಗ್ಬಿಡ್ಬೇಕೇ ! ಒಳ್ಳೇ ಸರ್ಪ್ರೈಸ್ ಅಂದ್ಕೊಂಡು ಮತ್ತೊಂದಿಷ್ಟು ಫೋಟೋ ಸೆಷನ್ನು ಮಾಡೋ ಹೊತ್ತಿಗೆ ಇನ್ನೊಂದಿಷ್ಟು ಜನರ ಆಗಮನವಾಯ್ತು. 
@Kottigehara office

Hinge sumne ;-)
ಎಂಟೂವರೆ ಹೊತ್ತಿಗೆ ತಿಂಡಿಯ ಶಾಸ್ತ್ರ ಮುಗಿಸಿ, ೪೫ ಜನರಿದ್ದ ತಂಡದ ಪರಸ್ಪರ ಪರಿಚಯ ಮಾಡ್ಕೊಂಡು ಟ್ರೆಕ್ಕಿಂಗಿಗೆ ನಮ್ಮನ್ನು ಕರೆದೊಯ್ಯಲು ಬಂದ ಜೀಪ್ಗಳಿಗೆ ಹತ್ತಿದ್ವಿ.


ಟ್ರೆಕ್ಕಿಂಗಲ್ಲಿ ನಡೆದ ಮಾತುಕತೆಗಳ ಬಗ್ಗೆ ಬರೀತಾ ಹೋದ್ರೆ ಅದೇ ಒಂದು ದೊಡ್ಡ ಕತೆಯಾದೀತು. ಹಾಗಾಗಿ ಅದ್ರ ಬಗ್ಗೆ ಬರೀದೇ ಚಾರಣದ ಸಮಯದಲ್ಲಿ ನಮಗೆ ಸಿಕ್ಕ ಕೆಲವು ಹೊಸ(ನನ್ನ ಅಥವಾ ಓದುತ್ತಿರೋ ಕೆಲವರ ಪಾಲಿಗಾದ್ರೂ ಹೊಸದು ಅಂದ್ಕೊಳ್ತಾ) ಸಸ್ಯಗಳ ಬಗ್ಗೆ ಬರೀತೀನಿ ಈ ಬಾರಿ.

1)ಮರಗಜ:
Maragaja

ಹಸಿರು ಬಣ್ಣದ ಮರಗಳಿಗೆ ಹಂಬಿಕೊಂಡೋ, ಜೋತೋ ಬೆಳೆಯೋ ಈ ಸಸ್ಯವನ್ನು ನೀವು ಜೋಗ, ಕಾರ್ಗಲ್ ಕಡೆ ಅಥವಾ ಮಲೆನಾಡಿನ ಇತರ ಕಾಡುಗಳಲ್ಲಿ, ತಡಿಯಂಡಮಾಲಲ್ಲಿ.. ಹೀಗೆ ಹಲವೆಡೆ ನೋಡಿರುತ್ತೀರ. ಕುಷನ್ನಿಗೆ, ಅಲಂಕಾರದ ಸಾಮಗ್ರಿಗಳ ತಯಾರಿಕೆಗೆ ಬಳಸೋ ಇದಕ್ಕೆ ಕೇಜಿಗೆ ೬೦ ಅಂತ ನಮ್ಮ ಜೊತೆಗೆ ಬಂದಿದ್ದ ಗೈಡ್ ಚಂದ್ರಣ್ಣ ಹೇಳ್ತಾ ಇದ್ರು. ಅಂದಂಗೆ ನಮ್ಮ ಜೊತೆಗೆ ಬಂದಿದ್ದ ಮತ್ತೊಬ್ಬ ಗೈಡಿನ ಹೆಸ್ರು ಅರ್ಜುನ.

ಹಾಗೇ ಮುಂದೆ ಸಾಗಿ ಮಳೆಗಾಲದಲ್ಲಿ ದೊಡ್ಡ ಫಾಲ್ಸಾಗಿರಬಹುದಾದ ಈಗ ಒಂದಿಷ್ಟು ನೀರು ತಣ್ಣಗೆ ಹರಿಯುತ್ತಿದ್ದ ಕೊಳ್ಳವನ್ನು ದಾಟಿದ್ವಿ.

2)ಹೆಸರು ಗೊತ್ತಿಲ್ಲದ ಹಳದಿ ಹೂವು:
 ಈ ಹೂವನ್ನು ಮಲೆನಾಡಿನ ಸುಮಾರು ಬೆಟ್ಟಗಳಲ್ಲಿ ಕಂಡಿದ್ದೇನೆ.ಆದ್ರೂ ಇದ್ರ ಹೆಸ್ರೇನು ಅಂತ ಇನ್ನೂ ಗೊತ್ತಿಲ್ಲ ! ನಿಮಗೇನಾದ್ರೂ ನೆನಪಿದ್ರೆ ಹೇಳಬಹುದು

3)ರಾಮಪತ್ರೆ ಅಥವಾ ರಾಮರಾಟೆ ಕಾಯಿ:

ಈ ಕಾಡಲ್ಲಿ ಬೇರೆಲ್ಲ ಕಡೆ ಇರುವಂತೆ ಕಾಡ್ಗಿಚ್ಚು ತುಂಬಾ ಕಾಮನ್ನಾ ಅನಿಸ್ತು ! ಸುಟ್ಟು ಕರಕಲಾದ ಬೆಟ್ಟದ ಕೆಲ ಕಡೆಗಳಲ್ಲೆಲ್ಲಾ ಮತ್ತೆ ಜೀವದಂಕುರವಾಗ್ತಿದ್ದದ್ದನ್ನು ನೋಡೋ ಖುಷಿಯಿತ್ತಾದ್ರೂ ಈಗ್ಲೇ ಇಷ್ಟು ಚೆನ್ನಾಗಿ ಕಾಣ್ತಿರೋ ಬೆಟ್ಟ ಹಸಿರಿಂದ ನಳ ನಳಿಸ್ತಿದ್ದಾಗ ಹೆಂಗಿರಬಹುದಿತ್ತು ಅನ್ನಿಸ್ತು.
ಸುಟ್ಟ ಮರ ಮತ್ತೆ ಚಿಗುರುತ್ತಿರೋದು



4)ಮುಳ್ಳು ಹಂದಿಯ ಮುಳ್ಳು:ಏನೋ ನೋಡ್ತಿರುವಾಗ್ಲೇ ದೀಪಕ್ ಕೈಯಲ್ಲಿ ಏನೋ ಹಿಡ್ಕಂಡಿರೋದು ಕಾಣಿಸ್ತು. ಏನು ಅಂತ ಹತ್ರ ಹೋಗಿ ನೋಡಿದ್ರೆ ಅದು ಮುಳ್ಳಂದಿ ಮುಳ್ಳು ಅಂತ ಗೊತ್ತಾಯ್ತು. ಅದ್ರ ತುದಿ ಮೈಗೆ ತಾಗಿಸ್ಕೋಬೇಡ, ವಿಪರೀತ ನಂಜು ಅದು ಅಂತ ಅಲ್ಲಿದ್ದ ಸುಮಾರು ಜನ ಅಂದ್ರು. ಮುಳ್ಳೇ ಹಿಂಗಿರುವಾಗ ಆ ಹಂದಿಯೇನಾದ್ರೂ ಎದ್ರಿಗೆ ಬಂದ್ರೆ ಹೆಂಗಪ್ಪಾ ಅನಿಸ್ತು !
 

ಯಾರಪ್ಪಾ ಇದು ನಮ್ಮ ಫೋಟೋನೇ ತೆಗ್ಯದು ;)
 ೫)ಗಬ್ಬಲಿ ಕಾಯಿ:
ನೋಡಲು ಸಣ್ಣ ಗೋಟಡಕೆಯ ತರ ಕಾಣೋ ಇದಕ್ಕೆ ಗಬ್ಬಲಿ ಕಾಯಿ ಅಂತಾರಂತೆ. ಇದನ್ನ ಬೆಕ್ಕುಗಳು ತಿನ್ನೋದು ಬಿಟ್ರೆ ಬೇರೇನು ಉಪಯೋಗವಿಲ್ಲ ಅಂದ್ರು ಅರ್ಜುನಣ್ಣ(ನಮ್ಮ ಗೈಡು)
Gabbali kaayi

ಹಂಗೇ ಒಂದು ಬೆಟ್ಟ ಹತ್ತಿಳಿಯುವ ಹೊತ್ತಿಗೆ ಒಂದು ಬಯಲು ಬಂತು. ಆ ಬೆಟ್ಟಕ್ಕೆ ಜಾಪ್ರಾಸಿ ದುರ್ಗ ಅಂತಾರೆ.  ಅಲ್ಲಿಂದ ಸುತ್ತಲಿನ ಎಲ್ಲಾ ಬೆಟ್ಟಗಳು, ಎದುರಿಗಿದ್ದ ಚಾರ್ಮಾಡಿ ಕಣಿವೆಗಳು ಕಾಣ್ತಿದ್ವು. ಅದೋ ಎಡಕ್ಕೆ ನೋಡಿ. ಅಲ್ಲಿ ಕಾಣ್ತಿರೋದು ಮಲಯ ಮಾರುತ ಅಂತ , ಅಲ್ಲಿ ಕಾಣ್ತಿರೋ ಶಾಲೆ ಮನೆ ಮೊರಾರ್ಜಿ ದೇಸಾಯಿ ಶಾಲೆ ಅಂತ ಪರಿಚಯಿಸಿದ್ರು ಅಲ್ಲಿಗೆ ಮುಂಚೆಯೇ ಬಂದೋರು.



೬)ಸತ್ತೋರ ಒನಕೆ ಮಂಡಲು ಹೂವು:
ನಸುಗುಲಾಬಿ(ಪಿಂಕ್) ಬಣ್ಣದ ಈ ಹೂವಿನ ಹೆಸ್ರು ಕೇಳಿ ನಂಗೂ ಆಶ್ಚರ್ಯವಾಯ್ತು. ಇಂಥಾ ಹೆಸ್ರೂ ಇರತ್ತಾ ಅಂತ !
ಸತ್ತೋರ ಒನಕೆ ಮಂಡಲು ಹೂವು:

೭)ಈಚಲು ಹಣ್ಣು:
ಈಚಲು ಮರದಿಂದ ಕಳ್ಳಬಟ್ಟಿ ತಯಾರಿಸೋದು ಕೇಳಿರ್ತೀರ. ಆದ್ರೆ ಈಚಲಿನ ಹಳದಿ ಕಾಯಿ ಮತ್ತು ಸಿಹಿಯಾಗಿರೋ ಕಪ್ಪು ಹಣ್ಣು ಕಂಡಿದ್ದೀರಾ ? ನೋಡದಿರೋರ ಪಾಲಿಗೊಂದು ಚಿತ್ರ :-)
ಈಚಲು ಕಾಯಿ
೮)ಕರ್ಣಕುಂಡಲದ ಹೂ:
ಗಾಢ ಗುಲಾಬಿ ಬಣ್ಣದ ಈ ಹೂವನ್ನು ಸುಮಾರಷ್ಟು ಜನ ನೋಡಿರಬಹುದು. ಇದನ್ನು ಆಯುರ್ವೇದೀಯ ಔಷಧಿಗಳಿಗೆ ಬಳಸುತ್ತಾರಂತೆ.
Karnakundala
೯)ಗೌಲು ಮರ:
ನೋಡಲು ನಮ್ಮ ಕಡೆಯ ಮತ್ತಿ ಮರದಂತೆ ಕಾಣೋ ಇದು ಹತ್ತಿರ ಹೋಗಿ ನೋಡಿದ್ರೆ ಮತ್ತಿಯಲ್ಲ. ಇದು ಔದುಂಬರ ಮರ ಅಂತ್ಲೂ, ತೇಗ ಅಂತ್ಲೂ , ಉಪನಯನದ ವಟುಗಳ ಕೈಗೆ ದಂಡವಾಗಿ ಕೊಡೋ ಮರವಂತ್ಲೂ .. ತಲೆಗೊಂದು ಗೆಸ್ಸುಗಳು ಸಾಗ್ತಿದ್ದಾಗ ನಮ್ಮ ಗೈಡು ಬಂದು ಮುಗುಳ್ನಗ್ತಾ ಇದು ಗೌಲು ಮರ, ಮಕ್ಕಳಾಗದ ಮಹಿಳೆಯರಿಗೆ ಔಷಧಿಗೆ ಬಳಸ್ತಾರೆ ಇದ್ರ ಚಕ್ಕೆಯನ್ನ ಅಂತ ಕೆತ್ತಿ ತೋರಿಸಿದಾಗ ಎಲ್ಲಾ ಗಪ್ ಚುಪ್ :-)



೧೦)ಹೆಸರರಿಯದ ನೀಲಿ ಹೂ:ಹಂಗೇ ಮುಂದುವರಿಯುತ್ತಿದ್ದಾಗ ಹೆಸರರಿಯದ ಈ ನೀಲಿ ಹೂವು ಮತ್ತೆ ಹಲವು ಜಾತಿಯ ಮಲ್ಲಿಗೆಗಳು ಸಿಕ್ಕಿದ್ವು.ಸಿಕ್ಕ ನಾಲ್ಕು ಜಾತಿಯ ಮಲ್ಲಿಗೆಗಳ ಬಗ್ಗೆ ಮತ್ತೆ ಮೂರು ಪ್ರಬೇಧದ ಚಿಟ್ಟೆಗಳ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ. 
ಜೊತೆಗೆ ಹಲವು ಬಣ್ಣದ ಎಲೆಗಳು ಬೇರೆ.. ಕೆಂಪೆಲೆ, ಕಂದೆಲೆ, ಪಿಂಕೆಲೆ.. ಹೀಗೆ ಹಲವು ಬಣ್ಣ ಬಣ್ಣದ ಎಲೆಗಳು.. ಎಲೆಗಳೇ ಹೂಗಳಂತೆ.. ಹಸಿರಲ್ಲೂ ಎಷ್ಟು ಪರಿಯಪ್ಪಾ ಅನಿಸಿದ್ದು ಸುಳ್ಳಲ್ಲ.







ಮುಂದಿನ ಭಾಗದಲ್ಲಿ:ಇನ್ನಷ್ಟು ಹೊಸ ಹೂಗಳು,ಇನ್ನೊಂದಿಷ್ಟು ಹಸಿರು ಮತ್ತೊಂದಿಷ್ಟು ಕತೆ :-)