Monday, October 28, 2013

ಕಾಲೇಜ್ ಕಹಾನಿ

ನೀರವ ರಾತ್ರಿ. ಜೀವನವೇ ಜಿಗುಪ್ಸೆಯಾಗಿ , ಮನಶ್ಯಾಂತಿಯನ್ನು ಹುಡುಕಿ ಅಲೆಯುತ್ತಿರೋ ಅಲೆಮಾರಿಯಂತೆ ಒಬ್ಬ ಕೆರೆಯನ್ನೇ ದಿಟ್ಟಿಸುತ್ತಾ ಅದರ ದಡದಲ್ಲಿ ಕುಳಿತಿದ್ದ. ಬೆಳದಿಂಗಳ ರಾತ್ರಿ. ಕೆರೆಯ ಅಲೆಗಳಲ್ಲಿ ಪ್ರತಿಬಿಂಬಿಸುತ್ತಿದ್ದ ಚಂದ್ರನ ಬಿಂಬ ನೋಡುತ್ತಿದ್ದರೆ ಆಗಸದ ಆ ಶಶಿ ಈತನಿಗೆ ಸಾಂತ್ವನ ಹೇಳಲೆಂದೇ ಭುವಿಗಿಳಿದು ಬಂದು ಕೆರೆಯಲ್ಲಿ ಈಜಾಡುತ್ತಿದ್ದಾನೇನೋ ಅನಿಸುತ್ತಿತ್ತು. ರೋಹಿಣೀಪತಿ ಪ್ರಭೆಯ ರಾತ್ರಿ ಸಭೆಗೆ ಆಗಮಿಸಿದ್ದ ತಾರೆಗಳೆಲ್ಲಾ ಮಿಂಚುತ್ತಾ ಆಗಸದಲ್ಲಿ ಚಿತ್ರ ವಿಚಿತ್ರ ಆಕೃತಿಗಳನ್ನು ಮೂಡಿಸುತ್ತಿದ್ದವು. ಸೃಷ್ಟಿಕರ್ತನ ಚುಕ್ಕಿಯಾಟಕ್ಕೋ , ರಂಗೋಲಿಗೋ ಅಂಗಳವಾದಂತಿದ್ದವು. ತಂಗಾಳಿಗೆ ಗತ್ತು ಬಂದಂತೆ ಕೊಂಬೆಗಳನ್ನು ಇಂಚಿಂಚೇ ಅಲ್ಲಾಡಿಸಿ ಬೀಗುತ್ತಿದ್ದ ಮರಗಳೂ ರಾತ್ರಿ ತಮ್ಮದೇ ಲೋಕವೆಂಬಂತೆ ಅಲ್ಲಲ್ಲಿ ಹಾರಾಡುತ್ತಿದ್ದ ಬಾವಲಿಗಳೂ ರಾತ್ರಿಯ ಚಂದಿರನ ಬೆಳಕಿಗೆ ಬೆಳಗಿದಂತಾಗುತ್ತಿದ್ದ ತೇಲು ಸಸ್ಯಗಳೂ, ತಾವರೆಗಳೂ ಕೆರೆಯ ಪರಿಸರಕ್ಕೊಂದು ಕಳೆ ತಂದುಕೊಟ್ಟಿದ್ದವು. ಬೀಸುತ್ತಿದ್ದ ಮಂದಮಾರುತದ ತಂಪಲ್ಲೂ ಕೆರೆಯ ದಡದಲ್ಲಿ ಕೂತಿದ್ದವ ಬೆವರುತ್ತಿದ್ದ. ಕೆರೆಯ ತಿಳಿನೀರು, ಅದರಲ್ಲಿ ಮೂಡುತ್ತಿದ್ದ ಪ್ರಶಾಂತ ಬಿಂಬ ಅಲ್ಲೋಲಕಲ್ಲೋಲವಾಗಿದ್ದ ಈತನ ಮನಸ್ಸಿಗೆ ಕಸಿವಿಸಿಯುಂಟುಮಾಡಿ. ಆ ಸಿಟ್ಟಿನಲ್ಲಿ ಕೈಗೆ ಸಿಕ್ಕಿದ ಕಲ್ಲನ್ನೆತ್ತಿ ಕೆರೆಗೆಸೆದ. ಮುಳುಗಿದ ಕಲ್ಲಿನಂತೆಯೇ ಈತ ಹಳೆಯ ನೆನಪುಗಳಲ್ಲಿ ಮುಳುಗತೊಡಗಿದ. ತಿಳಿಯಾಗುತ್ತಿದ್ದ ಚಂದ್ರನ ಬಿಂಬದಂತೆಯೇ ಈತನ ನೆನಪುಗಳು ಕಣ್ಣೆದುರು ಮೂಡತೊಡಗಿದವು.

ಬೆಂಗಳೂರಿಗೆ ಬಂದ ಹೊಸದು. ಕಾಲೇಜು ಜೀವನದ ಮೊದಲ ದಿನಗಳು. ಹಳ್ಳಿಯಿಂದ ಬಂದ ಈತನಿಗೆ ಇಲ್ಲಿನ ಜಗತ್ತೇ ವಿಚಿತ್ರವೆನಿಸಿತ್ತು. ದೊಡ್ಡವರಿಗೆಲ್ಲಾ ಅಣ್ಣಾ, ಸಣ್ಣವರಿಗೆಲ್ಲಾ ಹೆಸರಿಡೋದು, ಸಮಾನವಯಸ್ಕರಾದ್ರೆ ಲೋ, ಗುರೂ, ಸಿಸ್ಯಾ ಅನ್ನೋದೊಂದೇ ಗೊತ್ತಿದ್ದ ಆತನಿಗೆ ಇಲ್ಲಿ ಬಂದ ಮೇಲೆ ಶಬ್ದ ಸಾಮ್ರಾಜ್ಯವೊಂದಕ್ಕೆ ಕಣ್ಕಟ್ಟು ಬಿಟ್ಟಂತಾಗಿತ್ತು. ಮಗಾ, ಮಚ್ಚಿ, ಮಚ್ಚಾ, ಐಟಮ್ಮು, ಪೀಸು, ಸ್ಪೆಸಿಮನ್ನು, ಸೂಟಿ ಹೀಗೆ ಹಲವಾರು ಹೊಸ ಪದಗಳು. ರಾಜ್ಯದೆಲ್ಲೆಡೆಯ, ರಾಷ್ಟ್ರದೆಲ್ಲೆಡೆಯ ಜನ ಬಂದಂತೆ ಅವರ ಪದಗಳೂ ಇಲ್ಲಿ ಬಂದು ಬೆರೆತುಹೋಗಿದ್ದವು. ಬೇಬೆ, ಡೂಡ್ಗಳಿಲ್ಲದೆ ಮಾತಾಡೋದೇ ಕಷ್ಟವಾಗುವಂತ ಪರಿಸ್ಥಿತಿ ಇವನ ಹಾಸ್ಟೆಲ್ಲಿಗೆ ಬಂದುಹೋಗಿತ್ತು !  ಈ ಪರಿಸ್ಥಿತಿಯಲ್ಲಿ ಪಿಳಿಪಿಳಿ ಕಣ್ಣು ಬಿಡುವಷ್ಟರಲ್ಲೇ ಕ್ಲಾಸಲ್ಲಿದ್ದ ಒಬ್ಬ ಹುಡುಗಿ ಯಾಕೋ ಇಷ್ಟವಾಗಿ ಹೋಗಿದ್ದಳು. ನಾನು ಇಲ್ಲಿ ಬಂದಿರೋದು ಓದೋಕೆ, ಪ್ರೀತಿ ಮಾಡೋಕಲ್ಲ ಅಂತ ಎಷ್ಟು ಹೇಳಿಕೊಂಡರೂ ಯಾಕೋ ಕ್ಲಾಸಲ್ಲಿ ಕೂತಾಗ ಕಣ್ಣು ಅವಳತ್ತಲೇ ಹೊರಳುತ್ತಿತ್ತು. ಆದರೆ ಅವಳ ಹೆಸರು ಬಿಟ್ಟರೆ ಬೇರೇನೂ ಗೊತ್ತಿರದಿದ್ದರೂ ಆಕೆಯ ನಿತ್ಯದ ಟೈಟ್ ಜೀನ್ಸು, ಲೆಗ್ಗಿಂಗುಗಳನ್ನು ನೋಡಿದಾಗೆಲ್ಲಾ ಆಕೆ ಪೇಟೆಯವಳು , ತಾನು ಹಳ್ಳಿಯವನು . ಜೀನ್ಸು, ಶೂಗಳೆಲ್ಲಿ , ಸಾದಾ ಪ್ಯಾಂಟು ಚಪ್ಪಲಿಗಳೆಲ್ಲಿ ಎಂಬ ಕೀಳರಿಮೆ ಕಾಡುತ್ತಿತ್ತು. ಕಣ್ಣಂಚಿನ ನಗುವನ್ನೇ ನೋಡುತ್ತಾ ಕುಳಿತುಬಿಡುವ ಆಸೆಯಾಗುತ್ತಿದ್ದರೂ ಬಾಬ್ಕಟ್ಟನ್ನು ನೋಡಿದಾಗೆಲ್ಲಾ ದಿನಾ ಎಣ್ಣೆ ಹಾಕಿ ಬಾಚುವ ತನ್ನ ಎಣ್ಣೆಜಿಡ್ಡಿನ ಕೂದಲು ನೆನಪಾಗಿ ಮತ್ತೆ ತಲೆತಗ್ಗಿಸುವಂತಾಗುತ್ತಿತ್ತು.  ಆದರೂ ತಾನು ಬಂದ ಉದ್ದೇಶ ಏನು ಎಂದು ಅವನಿಗೆ ಅವನೇ ಮಾಡಿಕೊಳ್ಳುತ್ತಿದ್ದ ಸಮಾಧಾನಗಳಿಂದ ಎಷ್ಟೋ ಹೊತ್ತಿನ ನಂತರ ಮನಸ್ಸಿಗೆ ಶಾಂತಿ ಸಿಗುತ್ತಿತ್ತು.

ಆದರೆ ಭಾವನೆಗಳೆಂದರೆ ಹಾಗೆ. ಒಮ್ಮೆ ಮೊಳಕೆಯೊಡೆದರೆ ಅವನ್ನು ಚಿವುಟುವುದು ಕಷ್ಟ. ಎಷ್ಟೇ ತಡೆ ಹಾಕಿದರೂ ಅದು ಮರವಾಗೇ ಸಿದ್ದ. ಎಷ್ಟು ಬೇಡವೆಂದರೂ ತಡೆಯದ ಕಣ್ಣುಗಳು ಕೆಲವೊಮ್ಮೆ
ಅವಳತ್ತ ಹೊರಳಿಬಿಡುತ್ತಿದ್ದವು. ಕೊನೆಗೊಮ್ಮೆ ಎರಡನೆಯ ಇಂಟರ್ನಲ್ ಹೊತ್ತಿಗೆ ಅದು ಅವಳಿಗೂ ತಿಳಿದುಬಿಟ್ಟಿತು. ಒಂದಿನ  ಅವಳನ್ನು ಮಾತಾಡ್ಬೆಸ್ಬೇಕು ಅಂದ್ಕೊಂಡ್ರೂ ಪ್ರತೀ ಬಾರಿ ಅವಳೆದುರು ಹಾದಾಗ ಧೈರ್ಯ ಸಾಕಾಗ್ತಿರಲಿಲ್ಲ. ಹಿಂಗೇ ಒಂದ್ಸಲ ಮತ್ತೆ ಸಿಕ್ಕಿದ್ಲು ಅವ್ಲು.  ಯಾವ್ದೋ ಯೋಚನೆಯಲ್ಲಿ ಮುಳುಗಿದ್ದ ಅವನಿಗೆ ಆಕೆ ಹಲೋ ಅಂದಂಗಾಯ್ತು. ಇಂಟರ್ನಲ್ ರಿಸಲ್ಟ್ ಪೇಪರ್ ನೋಡೋಕೆ ಹೋಗಿದ್ದ ಆತ ಆಕೆಯ ಹತ್ರ ಏನು ಮಾತಾಡ್ಬೋದು ಅಂತ ಯೋಚ್ನೆ ಮಾಡೋಕೆ ಶುರು ಮಾಡಿದ. ಬ್ರೇಕಲ್ಲಿ ಲೈಬ್ರರಿ ಹತ್ರ  ಬಂದ್ರೆ ಸಿಗ್ರಿ . ಏನೋ ಡೌಟಿದೆ ಅಂದ್ಲು. ಸರಿ ಅಂದ ಆತ. ಇಂಟರ್ನಲ್ಲು ಆಗಿ ಎರಡು ದಿನ ಕಳೆದ್ದರಿಂದ ಲೈಬ್ರರಿಯ ಹತ್ತಿರ ಹೆಚ್ಚಿಗೆ ಜನರಿರಲಿಲ್ಲ. ಮಾತುಕತೆ ಹೀಗೇ ಸಾಗಿತು.
ಆಕೆ:ಹೇಗಿತ್ತು ಎಕ್ಸಾಮು ?
ಈತ:(ತಲೆ ತಗ್ಗಿಸಿಕೊಂಡೇ)ಚೆನ್ನಾಗಿತ್ತು.
ಆಕೆ:ಯಾಕ್ರಿ ಸುಳ್ಳೇಳ್ತೀರಾ? ನಿಮ್ಮ ಪೇಪರ್ ನೊಡ್ಕೋಂಬಂದೆ. ಮೊದಲ ಇಂಟರ್ನಲ್ಲಲ್ಲಿ ೨೫ ತಗೊಂಡ ಸಬ್ಜೆಕ್ಟಿಗೆ ಈ ಸಲ ೧೫. ಪೇಪರ್ರೇನು ಅಷ್ಟು ಕಷ್ಟ ಇರ್ಲಿಲ್ವಲ
ಈತ:ಆಂ, ಹೌದಾ ?
ಆಕೆ: ಎಲ್ಲಿದೆ ನಿಮ್ಮ ಮನಸ್ಸು? ಏನಾಗಿದೆ ನಿಮ್ಗೆ. ಯಾವಾಗ್ಲೂ ನನ್ನೇ ನೋಡ್ತಾ ಕೂತಿರ್ತೀರ ಕ್ಲಾಸಲ್ಲಿ. ಇನ್ನೇನಾಗ್ಗುತ್ತೆ ? ನೋಡಕ್ಕೆ ಹಳ್ಳಿ ಗಮಾರನ ತರ ಇದೀಯ. ಪೇಟೆ ಹುಡ್ಗೀರನ್ನ ನೋಡ್ತಾ ಕೂತು ಬಿಟ್ರೆ ಆಯ್ತಾ ? ನಾವೂ ನಿನ್ನ ನೋಡ್ಕೋತಾ ಇರ್ಬೇಕಾ ? ನೀನೊಬ್ನೆ ಇಲ್ಲಿ ಓದೋಕೆ ಬರೋನು. ನಾವೆಲ್ಲಾ ಇಲ್ಲಿ ಸ್ಟೈಲು ಮಾಡೋಕೆ ಬರೋರು ಅಂದ್ಕೊಂಡಿದೀಯ ಹೇಗೆ ?
ಈತ: ರೀ. ಹಂಗೆಲ್ಲಾ ಇಲ್ಲ. ಛೇ .. ನೀವು ನನ್ನ ತಪ್ಪು ತಿಳೀತಾ ಇದೀರ..
ಆಕೆ: ಹಂಗೂ ಇಲ್ಲ. ಹಿಂಗೂ ಇಲ್ಲ. ಇನ್ನೊಂದ್ಸಲ ಕ್ಲಾಸಲ್ಲಿ ನನ್ನ ನೋಡ್ತಾ ಕೂತ್ರೆ ಸರಿಗಿರಲ್ಲ. ಓದೋಕೆ ಅಂತ ಬಂದಿದೀರ. ನಿಮ್ಮ ಪಾಡಿಗೆ ಅದ್ನ ಮಾಡ್ಕೊಂಡು ಹೋಗಿ ಅಂತ ದಡಕ್ಕನೆ ಎದ್ದು ಹೋದ್ಲು.. ಅಬ್ಬಾ ಅಂದ್ಕೊಂಡು ಕಣ್ಣು ಮುಚ್ಚಿ ಬಿಡ್ತಾನೆ. ಆದ್ರೆ ಆತ ಲೈಬ್ರರಿಯ ಹತ್ರ ಅಲ್ಲ. ಕ್ಲಾಸ ಹತ್ರವೇ ಇದ್ದಾನೆ. ಯಪ್ಪಾ ಎಂತಾ ಕಲ್ಪನೆಗಳು ಅಂದ್ಕೊಂಡ.


ಅವನು ಕಲ್ಪನೆಗಳಲ್ಲಿ ಮುಳುಗಿದ್ದಾಗಲೇ ಆಕೆಯೂ ಆತನನ್ನು ಮಾತಾಡಿಸ್ಬೇಕು. ಆದ್ರೆ ಏನು ಮಾತಾಡೋದು ಅನ್ನೋ ಯೋಚನೇಲಿ ಮುಳುಗಿ ಹೋಗಿದ್ಲು.ಹಲೋ ಅಂದ ಆತ. ಹಲೋ ಅಂದ್ಲು ಆಕೆ.ನೀವು ಫ್ರೀ ಇದ್ರೆ ಕ್ಯಾಂಟೀನತ್ರ ಸಿಗ್ತೀರ ಬ್ರೇಕಲ್ಲಿ ? ಏನೋ ಮಾತಾಡ್ಬೇಕು ಅಂದ ಅವ. ಏನೋ ಹಳ್ಳಿ ಗಮಾರ ಅಂದ್ಕೊಂಡಿದ್ದೆ, ಆದ್ರೆ ಸಿಕ್ಕಾಪಟ್ಟೆ ಫಾರ್ವರ್ಡ್ ಇರೋ ತರ ಇದಾನೆ ಇವ. ಪರ್ವಾಗಿಲ್ಲ ಅಂತ ನಸುನಕ್ಕು ಹೂಂ ಅಂದ್ಲು ಈಕೆ.
ಆತ: ನನಗೆ ನೆಸ್ ಕಾಫಿ ಮತ್ತು ನ್ಯೂಡಲ್ಸ್. ನಿಮ್ಗೆ ?
ಈಕೆ : ನಂಗೂ ಅದೇ(ಆಶ್ಚರ್ಯದಿಂದ)
ಆತ : ಮತ್ತೆ ಹೇಗಿದೀರ. ಹೇಗಾಯ್ತು ಇಂಟರ್ನಲ್ಸ್ ?
ಈಕೆ : ಓ, ಸೂಪರ್.
ಆತ:  ಗುಡ್. ಅಂತೂ ಇಂಟರ್ನಲ್ಸ್ ಮುಗೀತು. ವೀಕೆಂಡಿಗೆ ಏನು ಪ್ಲಾನು ?
ಈಕೆ : ಓ ಗಾಡ್. ನಿಮ್ಮ ಮಾತು ಕೇಳ್ತಾ ಇದ್ರೆ ಆಶ್ಚರ್ಯ ಆಗುತ್ತೆ ರೀ. ನೀವು ಯಾವ್ದೋ ಹಳ್ಳಿಯವ ಅಂದ್ಕೊಂಡಿದ್ದೆ ನಿಮ್ಮ ಮೊದಲ ಕೆಲವು ದಿನಗಳ ವೇಷ ನೋಡಿ. ಪರ್ವಾಗಿಲ್ಲ ರೀ. ಸಿಕ್ಕಾಪಟ್ಟೆ ಫಾಸ್ಟಾಗಿ ಚೆಂಜ್ ಆಗಿದೀರ.
ಆತ: ಹುಡ್ಗೀರತ್ರ ಮಾತೇ ಆಡದವ ಇವತ್ತು ಹೇಗಿಷ್ಟು ಮಾತಾಡ್ತಾ ಇದಾನೆ ಅಂತಾನ ?
ಈಕೆ: ಸೋರಿ. ಬೇಜಾರು ಮಾಡ್ಕೋಬೇಡಿ. ಆದ್ರೆ ಹೌದು.  ನೀವು ಎಲ್ರನ್ನೂ ನೀವು ಅಂತೀರ ಅಂತ ಎಲ್ಲಾ ಹಿಂದೆ ಬಿಟ್ಟು ಬಿದ್ದು ಬಿದ್ದು ನಗ್ತಾರೆ. ನೀವು ಬದಲಾಗೋದೆ ಇಲ್ಲಾ ಅಂದ್ಕೊಂಡಿದ್ದೆ. ಆದ್ರೆ ಇವತ್ತು ಆಶ್ಚರ್ಯ ಆಗ್ತಿದೆ. ಆದ್ರೂ ಯಾಕಿಂತ ದಿಢೀರ್ ಬದಲಾವಣೆ ?
ಆತ: ಹೆ ಹೆ. ಹಂಗೇನಿಲ್ಲ ರೀ. ಪರಿವರ್ತನೆ ಜಗದ ನಿಯಮ ಅಂತಾರಲ್ಲ. ಇಲ್ಲಿದ್ಮೇಲೆ ಇಲ್ಲಿಗೆ ತಕ್ಕ ಹಾಗೆ ಇರ್ಬೇಕಲ್ವಾ ? ಮತ್ತೆ ನಿಮ್ಮ ಫೇವರಿಟ್ ಚಾಟ್ ಯಾವ್ದು ? ನ್ಯೂಡಲ್ಸಾ ಅಂದ. ನಗುತ್ತಾ ?
ಈಕೆ: ಇಲ್ಲ ರೀ. ನಾನು ಈ ಪೇಟೆಲಿದ್ರೂ ನ್ಯೂಡಲ್ಸ್, ಬರ್ಗರ್, ಫಿಜ್ಜಾಗಳಿಗಿಂತ ಮಸಾಲೆಪುರಿ, ಪಾನಿಪೂರಿ, ನಮ್ಮಜ್ಜಿ ಮಾಡೋ ಚಿತ್ರಾನ್ನಗಳ್ನೇ ಜಾಸ್ತಿ ಇಷ್ಟಪಡ್ತೀನಿ
ಆತ: ಓ, ಪರ್ವಾಗಿಲ್ಲ. ಜಸ್ಟ್ ಅಟ್ ೨೫ ಅನ್ನೋ ಬರ್ಗರ್ ರೇಟಲ್ಲಿ ಎರಡ್ಮೂರು ಮಸಾಲೆಪುರಿ ತಿನ್ನಬೋದು ಅನ್ನೋ ಆಲೋಚನೆ.
ಈಕೆ: ಹೆ ಹೆ. ದುಡ್ಡಿನ ಆಲೋಚನೆ ಅಂತಲ್ಲ. ಆದ್ರು ಯಾಕೋ..
ಹೀಗೆ ಏನೆಲ್ಲಾ ಕಲ್ಪನೆಗಳು. ವಾ, ಏನಂದ್ಕೊಡಿದ್ದೆ.ಎಂಥಾ ಬದಲಾವಣೆ ಅಬ್ಬಾ ಅಂತ ಕಣ್ಮುಚ್ಚಿ ತೆರಿತಾಳೀ. ಆದ್ರೆ ಏನಿದು ? ಕ್ಯಾಂಟೀನಲ್ಲಿರಲಿಲ್ಲ. ಬದಲಿಗೆ ಆ ಹುಡುಗನ ಎದ್ರಿಗೇ ಕ್ಲಾಸ ಹತ್ರ ಇದಾಳೆ.
ಅಬ್ಬಾ ಎಂಥಾ ಕಲ್ಪನೆಗಳು ಅಂದ್ಕೊಂಡ್ಳು.


ಇಬ್ರೂ ವಾಸ್ತವಕ್ಕೆ ಬಂದು ಹಲೋ ಅನ್ನೋದು ಸರಿ ಹೋಯ್ತು. ವಾಸ್ತವಕ್ಕೆ ಬಂದರೂ ತಮ್ಮ ಕಲ್ಪನೆಗಳನ್ನು ನೆನೆಸಿಕೊಂಡು ಆಕೆಗೆ ನಗು ಬರ್ತಾ ಇದ್ರೆ, ಈತನಿಗೆ ಭಯ ಆಗ್ತಾ ಇತ್ತು. ಪರಸ್ಪರರ ಮುಖದಲ್ಲಿನ ಅನಿರೀಕ್ಷಿತ ಭಾವ ನೋಡಿ ಇಬ್ಬರಿಗೂ ಆಶ್ಚರ್ಯ ಆಯ್ತು.  ಏನೋ ಯೋಚ್ನೆ ಮಾಡ್ತಾ ಇದ್ದಂಗಿದೆ ಅಂದ್ಲು ಆಕೆ. ಈ ಇಲ್ಲಪ. ನೀವು ಏನೋ ಯೋಚ್ನೆ ಮಾಡ್ತಾ ಇದ್ದಂಗಿತ್ತು ಅಂದ ಇವ.
ಹೇ ಏನೂ ಇಲ್ಲಪ. ಮತ್ತೆ ಹೇಗಿದೀರ ,ಹೇಗಾಯ್ತು ಇಂಟರ್ನಲ್ಲು ಅಂದ್ಲು ಅವ್ಳು. ಅಷ್ಟು ಚೆನ್ನಾಗಾಗ್ಲಿಲ್ಲ ಅಂತ ಸಪ್ಪೆ ಮೋರೆ ಹಾಕಿದ ಅವ ನಿಮ್ದೆಂಗಾಯ್ತು ಅಂದ ? ನಾಟ್ ಬ್ಯಾಡ್ . ನಿಮ್ಗೊಂದು ರಿಕ್ವೆಸ್ಟ್. ಇಲ್ಲ ಅನ್ಬಾರ್ದು ಅಂದ್ಲು. ಎಲ್ಲಿ ನನ ಮುಖ ನೋಡ್ಬೇಡ ಅಂತಾಳೋ ಅಂತ ಹೆದರಿದ್ದ ಅವನು ಹೆದರುತ್ತಲೇ ಹೂಂ ಅಂದ. ಪ್ಲೀಸ್, ನೀವು ಅಂತ ಕರಿಬೇಡಿ ನನ್ನ. ಹೆಸರಿಟ್ಟು ಕರೀರಿ.. ಐ ಡೋಂಡ್ ಲೈಕ್ ಇಟ್. ನನ್ನೆಸ್ರು ಕರ್ರಮ್ಮ, ಬೆಳ್ಳಮ್ಮ, ಕುರುಡಮ್ಮ ಅಂತೇನು ಇಟ್ಟಿಲ್ಲ , ಲಕ್ಷಣವಾಗೇ ಇಟ್ಟಿದಾರೆ ಓಕೆ. ಅಂತ ನಗೋಕೆ ಶುರು ಮಾಡಿದ್ಲು. ಇವನಿಗೆ ಅಬ್ಬಾ ಎನಿಸಿ ಹೂಂ ಅಂದ.

ಅವತ್ತಿಂದ ನೀವು ಹೋಗಿ, ನೀನು ಆಯ್ತು. ಮೊಬೈಲ್ ನಂಬರ್ ಬದಲಾಯ್ತು. ಸಾದಾ ಪ್ಯಾಂಟ್  ಹೋಗಿ ಜೀನ್ಸ್, ಉದ್ದಕೂದಲ ಎಣ್ಣೆತಲೆಯ ಬದ್ಲು ಮಿಲ್ಟ್ರಿ ಕಟ್ ಬಂತು. ಟೈಟ್ ಜೀನ್ಸ್ ಹೋಗಿ ಚೂಡಿದಾರ, ನ್ಯೂಡಲ್ಸ್ ಬದ್ಲು ರೈಸ್ ಬಾತುಗಳೂ ಬಂದವು ! ಸೈಲೆಂಟಾಗಿ ಶುರುವಾದ ಈ ಬದಲಾವಣೆಗಳು ಅವರಿಗೇ ಆಶ್ಚರ್ಯ ಉಂಟು ಮಾಡಿದ್ವು. ಮಾತಾಡಿದ್ರೆ ಏನೋ ಕಳ್ದು ಹೋಗತ್ತೆ ಅಂತಿದ್ದ ಆತ ಈಕೆಯ ಪರಿಚಯವಾದಾಗಿನಿಂದ ಮೈಬಿಚ್ಚಿ ಎಲ್ಲರತ್ರನೂ ಮಾತಾಡೋಕೆ ಶುರುಮಾಡಿದ. ಮೊದಲ ಸೆಮ್ ಮುಗಿಯೋ ಹೊತ್ತಿಗೆ ಸ್ನೇಹಿತರೆಲ್ಲರೂ ಆಪ್ತರಾಗಿದ್ರು. ಹಾಗಾಗಿ   ಮಾತು ಮಾತು ಮಾತು.. ಕ್ಲಾಸಲ್ಲಿ,ಬ್ರೇಕಲ್ಲಿ, ಸೈಲೆಂಟಾಗಿರೋ ಲೈಬ್ರರೀಲೂ ಬಿಡದಂತೆ, ಕ್ಯಾಂಟೀನು, ಬಸ್ಸಲ್ಲಿ. ಅದೂ ಸಾಕಾಗದಂತೆ  ಫೋನ್, ವಾಟ್ಸಾಪು, ಫೇಸ್ಬುಕ್ಕು, ಜೀಚಾಟು ಹೀಗೆ ಸಿಕ್ಕಲ್ಲೆಲ್ಲಾ ಮಾತು. ಮನೆಯವರತ್ರ ಕಾಲು ಘಂಟೆ ಮಾತಾಡಿದ್ರೂ ತಲೆ ಚಿಟ್ಟಿಡಿಯುವಂತ ಆದ್ರೆ ಸ್ನೇಹಿತರತ್ರ ಮಾತಾಡ್ತಾ ಮೂರು ದಿನಕ್ಕೆ ಮೊಬೈಲು ರಿಚಾರ್ಜ್ ಮಾಡುವಷ್ಟು ಮಾತು.. ಹೀಗೆ ಒಂದಿನ ಮೊಬೈಲು, ಇಂಟರ್ನೆಟ್ಟಿಲ್ಲದಿದ್ರೆ ಜೀವನವೇ ಸಾಗೋಲ್ಲ ಅನ್ನೋಷ್ಟು ಮಾತು. ಬಿಡುವಿಲ್ಲದಷ್ಟು ಮಾತು. ನಂಗೆಂತೂ ಅರ್ಧ ಘಂಟೆ ಈ ಮೊಬೈಲಿಲ್ದೇ ಇರಕ್ಕಾಗಲ್ಲ ನಿಮ್ಗಿರಕಾಗತ್ತಾ ಅಂತಿದ್ಲು ಆಕೆ . ಒಂದರ್ಧ ಘಂಟೆನಾಡ್ರೂ ಮೊಬೈಲು ಹತ್ರ ಹಿಡ್ಕೋ. ಎಲ್ಲೆಲ್ಲೋ ಒಗಿಬೇಡ. ಮೆಸೇಜ್ ಮಾಡಿದ್ರೆ ಮಾರ್ನೆ ದಿನ ರಿಪ್ಲೈ ಮಾಡ್ತಿಯ!.. ಅನ್ನೋ ಬೈಗುಳಗಳು ಕಾಮನ್ನಾಗಿ ಹೋಗಿದ್ವು. ಉಫ್..ಯಾಕೋ ಕೆಲವೊಮ್ಮೆ ಮಾತಿಲ್ದೆ ಹೋದ್ರೆ ಏನೋ ಕಳಕೊಂಡಂತೆ , ಈ ಮಾತು ಮಾತಲ್ಲೇ ಎಲ್ಲೋ ಕಳೆದುಹೋದಂತೆ , ಮಾತಾಡ್ತಾ ಮಾತಾಡ್ತಾ ಅದ್ರಲ್ಲೇ ಮುಳುಗಿಹೋಗಿ ಮಾಡಬೇಕಾಗಿದ್ದ ಇನ್ನೇನೋ ಮಹತ್ಕಾರ್ಯಗಳನ್ನು ಮಿಸ್ ಮಾಡ್ಕೊಳ್ಳುತ್ತಿರುವಂತೆಯೂ ಅನಿಸುತ್ತಿತ್ತು.

ನಮ್ಮ ಭಾರತೀಯ ಸಂಸ್ಕೃತಿಯ ಬಗ್ಗೆ ತಿಳೀಬೇಕು, ಸಂಸ್ಕೃತ ಎಂ.ಎ ಮಾಡ್ಬೇಕು. ಸಂಗೀತ, ಭರತನಾಟ್ಯ ಕಲೀಬೇಕು ಅಂತ ಎಷ್ಟೆಲ್ಲಾ ಆಸೆಗಳಿದ್ದ ನನ್ನ ಇಲ್ಲಿ ತಂದು ಸೇರ್ಸಿದಾರೆ ನನ್ನ ತಂದೆತಾಯಿಗಳು. ಅವ್ರಿಗೆ ಎಷ್ಟು ಬಡ್ಕೊಂಡು, ಬೇಡ್ಕೊಂಡ್ರೂ ಆರ್ಥ ಆಗೋಲ್ಲ.  ಅವೆಲ್ಲಾ ಟೈಂ ವೇಸ್ಟು. ಅದ್ರಿಂದ ಹೊಟ್ಟೆ ತುಂಬಲ್ಲ ಅಂತಾರೆ. ಎಲ್ಲಾದ್ರೂ ಅವಕಾಶ ಸಿಕ್ರೆ ನಾನು ಈ ಕೋರ್ಸನ್ನ ಬಿಟ್ಟು ಅದಕ್ಕೇ ಹೋಗ್ಬಿಟ್ತೀನಿ ಅಂತಿದ್ಲು ಆಕೆ. ಓ ಹೌದಾ. ನಮ್ಕಡೆ ಹಾಗೇನಿಲ್ಲ. ನಮ್ಮ ತಂದೆ ತಾಯಿ, ನೀನೂ ನಮ್ಮ ಜೊತೆ ಕೂಲಿಗೆ ಬಾ ಅಂತಾರೆ. ಆದ್ರೆ ನಮ್ಮೂರಲ್ಲಿ ಸರಿಯಾಗಿ ಮಳೆ ಇಲ್ದೆ ಮೂರು ವರ್ಷ ಆಯ್ತು. ಫುಲ್ ಕಷ್ಟ. ಹಂಗಾಗಿ ನಾನು ಇಲ್ಲೇ ಓದಿ ಒಂದು ಒಳ್ಳೆ ಕೆಲ್ಸ ಹಿಡಿಬೇಕು ಅಂತಿದೀನಿ ಅಂತಿದ್ದ ಈತ. ಹೀಗೆ ಭಿನ್ನ ಧೃವಗಳಾದ್ರೂ ಏನೋ ಸೆಳೆತ ಇಬ್ಬರನ್ನೂ ಹಿಡಿದಿಟ್ಟಿತ್ತು. ಮೊದಲ್ನೇ ಸೆಮ್ಮು ಮುಗಿದು ರಜ ಬಂದಾಗ ಈ ರಜ ಯಾಕೆ ಬರತ್ತೋ ಅನಿಸಿಬಿಟ್ಟಿತ್ತು. ರಜಾಕ್ಕೆ ಊರಿಗೆ ಬಂದವನಿಗೆ ಮೊದಲೆರೆಡು ದಿನಗಳು ಹೇಗೋ ಕಳೆದುಹೋದ್ವು. ಆದ್ರೆ ಮೂರ್ನೇ ದಿನದಿಂದ ದಿನವೇ ಪಾಸಾಗ್ತಿಲ್ಲ. ಊರಲ್ಲಿ ಮೊಬೈಲ್ ನೆಟ್ವರ್ಕು ಸಿಗೋದೇ ಕಷ್ಟ. ಅಂತದ್ರಲ್ಲಿ ಇಂಟರ್ನೆಟ್ಟೆಲ್ಲಿಂದ ಬರ್ಬೇಕು ? ಎಲ್ಲೋ ಗುಡ್ಡ ಹತ್ತಿದ್ರೆ ಒಂದು ಪಾಯಿಂಟ್ ನೆಟ್ವರ್ಕು ಸಿಗ್ತಿತ್ತು. ಅದ್ರಲ್ಲೇ ಆಕೆಗೆ ಕರೆ ಮಾಡೋಕೆ ಸಿಕ್ಕಾಪಟ್ಟೆ ಸಲ ಟ್ರೈ ಮಾಡ್ತಿದ್ದ. ಆದ್ರೆ ಒಂದು ಸಲವೂ ಆಕೆ ಫೋನ್ ಎತ್ತುತ್ತಿರಲಿಲ್ಲ. ಸುಮಾರು ಸಲ ಸ್ವಿಚ್ ಆಫ್ ಬರ್ತಿತ್ತು. ಕೆಲೋ ಸಲ ರಿಂಗಾದ್ರೂ ಯಾರೂ ಎತ್ತುತ್ತಿರಲಿಲ್ಲ. ಆಕೆಗೆ ಏನಾಯ್ತು ಅಂತ ನೆನೆನೆನೆದೇ ಬೇಜಾರಾಗ್ತಿತ್ತು. ಕೆಲೋ ಗೆಳೆಯರನ್ನ ಕೇಳಿದ್ರೂ ಗೊತ್ತಿಲ್ಲ ಗುರೂ ಅನ್ನೋ ಉತ್ರವೇ ಸಿಗ್ತು. ಅಷ್ಟಕ್ಕೂ ರಜದಲ್ಲಿ ಯಾರು ಎಲ್ಲಿ ಹೋಗ್ತಾರೆ ಅಂತ ಯಾರು ತಲೆ ಕೆಡಿಸ್ಕೋತಾರೆ ? ಹುಡ್ಗಿಯರಿಗೆ ಫೋನ್ ಮಾಡಿದ್ರೆ ಗೊತ್ತಾಗ್ತಿತ್ತೇನೋ. ಆದ್ರೆ ಯಾಕೋ ಮನಸ್ಸು ಬರ್ಲಿಲ್ಲ. ಊರಿಗೋಕೋಕೆ ಮುಂಚಿನ ದಿನ ನಡೆದ ಸಂಭಾಷಣೆ ನೆನಪಿಗೆ ಬಂತು..

ನಿನ್ನಿಷ್ಟದಂತೆ ನೀನು ಇಲ್ಲಿ ಯಾವ್ದೋ ಕೆಲ್ಸ ಹಿಡಿತೀಯ. ಮುಂದೆ ಅಂದಿದ್ಲು ಒಂದ್ಸಲ ಮಾತಾಡ್ತಾ ಆಡ್ತಾ ಆಕೆ. ಮುಂದೆ ಮದ್ವೆ ಅಂದಾಗ ಇಬ್ರೂ ನಕ್ಕಿದ್ರು. ಯಾರ್ನ ಅಂದಾಗ ನಿನ್ನೇ ಅನ್ನಬೇಕು ಅಂತ ಸಾಕಷ್ಟು ಮನಸ್ಸಾದ್ರೂ ಯಾಕೋ ಬಾಯಿ ಬಂದಿರಲಿಲ್ಲ. ಸುಮ್ನೆ ನಕ್ಕಿದ್ದ. ನೀನೋ ಆಮೇಲ್ಯಾವಾಗಾದ್ರೂ ಹಳ್ಳಿಗೆ ಹೋಗಿ ಸೆಟ್ಲ್ ಆಗೋಣ ಅಂತಿರ್ತೀಯ. ಆದ್ರೆ ಇಲ್ಲಿನ ಹುಡ್ಗೀರಿಗೆ ಹಳ್ಳಿಗೋಗೋಕೆ ಇಷ್ಟ ಇರಲ್ಲ. ಹಂಗಾಗಿ ಹಳ್ಳಿಲಿರೋರ್ನ ಅಥವಾ ಹಳ್ಳಿ ಬಗ್ಗೆ ಇಷ್ಟ ಇರೋರ್ನೇ ಮದ್ವೆ ಆಗೋದು ಬೆಟರ್ ಅಂತ ಅವಳೂ ನಕ್ಕಿದ್ಲು. ಆ ಮಾತಿನ ಇನ್ನೊಂದು ಅರ್ಥ ಅವನಿಗೆ ಆಗಿರದಿದ್ರೂ ಅವನೂ ಹೌದೌದು ಅಂತ ನಕ್ಕಿದ್ದ. ಹಳ್ಳಿಲಿರೋರ್ನ ಮದ್ವೆ ಆಗು ಅಂದ್ಲು ಅಂದ್ರೆ ನನ್ನ ಮರೆತುಬಿಡು, ನನ್ನಂತೋರ್ನ ಹಳ್ಳಿಯವನಾದ ನೀನು ಪ್ರೀತಿಸೋದು ತಪ್ಪು ಅನ್ನೋ ಅರ್ಥದಲ್ಲಿ ಅವಳು ಅಂದಿದ್ಲಾ ಅನ್ನೋ ಸಂದೇಹ ಊರಲ್ಲಿ ಖಾಲಿ ಕೂತಿದ್ದ ಇವನ ಮನಸ್ಸಲ್ಲಿ ಕೊರಿತಾ ಇತ್ತು. ಖಾಲಿ ಮನಸ್ಸು ದೆವ್ವದ ಆಸ್ಥಾನ ಅಂತಾರೆ. ಹಾಗಾಗಿ ನೂರೆಂಟು ಯೋಚನೆಗಳು.ಅದ್ನೇ ಬಗೆಹರಿಸಿಕೊಳ್ಳೋಣ ಅಂತ ಸುಮಾರು ಸಲ ಗುಡ್ಡ ಹತ್ತಿ ಪ್ರಯತ್ನ ಪಟ್ರೂ ಆಗಿರಲಿಲ್ಲ. ಮಗನ ಉದಾಸಮುಖ ನೋಡಿ ಏನಾಯ್ತು ಅಂತ ಚಿಂತೆ ಮಾಡೋಕೆ ಶುರು ಮಾಡಿದ್ದ ಅಪ್ಪ, ಅಮ್ಮನ್ನ ನೋಡಿ ಈತ ಖುಷಿಯಾಗಿದ್ದಂತೆ ತೋರಿಸಿಕೊಳ್ಳತೊಡಗಿದ. ಆದರೆ ನಗೆಯ ಮುಖವಾಡದ ಹಿಂದೆ ಅಳು ಸಂದರ್ಭಕ್ಕೆ ಕಾದು ವಿಸ್ಫೋಟಿಸುವ ಜ್ವಾಲಾಮುಖಿಯಂತೆ ಕಾಯುತ್ತಾ ಕುಳಿತಿತ್ತು. ಮನೆಯವರೆಲ್ಲಾ ಪಕ್ಕದ ಹಳ್ಳಿಯ ಮದುವೆಗೆ ಹೋಗಬೇಕಾಗಿ ಬಂತು. ಎಷ್ಟು ಒತ್ತಾಯ ಮಾಡಿದ್ರೂ ಹೋಗದೇ, ಏನೋ ನೆಪ ಹೇಳಿ ತಪ್ಪಿಸಿಕೊಂಡಿದ್ದ.  ಮಧ್ಯಾಹ್ನದ ತನಕವೂ ಹೊದ್ದು ಮಲಗಿದ್ದ ಈತ ಸಂಜೆಯ ಹೊತ್ತು ಬೇಜಾರು ಬಂದು ತನ್ನ ನೆಚ್ಚಿನ ತಾಣ ಊರಕೆರೆಯ ಬಳಿ ಬಂದಿದ್ದ.

ಅಲ್ಲಿನ ಸೂರ್ಯಾಸ್ತ, ಹಾರುಹಕ್ಕಿಗಳ ನಾನಾ ರೂಪ, ಹಕ್ಕಿಗಳ ನಿನಾದವನ್ನ ಕೇಳುತ್ತಾ ಮೈಮರೆತವನಿಗೆ ಹೊತ್ತು ಕಳೆದು ರಾತ್ರಿಯಾಗಿದ್ದೇ ತಿಳಿಯಲಿಲ್ಲ. ಹೊತ್ತಾದರೂ ಎಲ್ಲಿ ಹೋಗಬೇಕು ? ಯಾಕೆ ಹೋಗಬೇಕು ? ಪ್ರೀತಿಯೇ ಕೈಸಿಗದ ಮೇಲೆ ಬದುಕಿದ್ದೂ ಏನು ಫಲ. ಇಲ್ಲೇ ಸತ್ತು ಬಿಡಲೇ ಎಂಬ ಆಲೋಚನಾ ತರಂಗಗಳು ಮೂಡತೊಡಗಿದ್ದವು. ಆದ್ರೂ ಸಾಯೋ ನೆನಪಾದಾಗೆಲ್ಲಾ ತನ್ನ ಮೇಲೆ ನೂರೆಂಟು ಕನಸು ಕಂಡ ತಂದೆ, ತಾಯಿಯ ಪ್ರೀತಿ ನೆನಪಾಯ್ತು. ಮಗ ಬಂದಿದ್ದಾನೆ ಅಂತ ತಾಯಿ ಮಾಡಿದ ಕಜ್ಜಾಯ, ಕಡುಬುಗಳನ್ನ ನೆನೆದು ಬಾಯಲ್ಲಿ ನೀರು ಬಂತು. ಬರಲಿರೋ ಆಲೆಮನೆ ಬೆಲ್ಲದ  ನೆನಪು ಬಂದು ಬಾಲ್ಯದ ಮಧುರ ನೆನಪುಗಳು ಮರುಕಳಿಸಿದ್ವು. ಚಿಕ್ಕವನಿದ್ದಾಗ ಈಜಿ ತೇಲಿದ ಕೆರೆಯಲ್ಲಿ ಈಗ ಹೆಣವಾಗಿ ಕೊಳೆತು ತೇಲೋ ಕಲ್ಪನೆಯೇ ಅಸಹ್ಯವೆನಿಸಿತು. ಸಾಯ್ಲೇಬೇಕೂಂದ್ರೆ ಒಂದು ಕೊನೆ ಬಾರಿ ಅವನ್ನೆಲ್ಲಾ ತಿಂದು, ಆಲೆಮನೆ ಸವಿದು ಸಾಯೋಣ. ಗಡಿಬಿಡಿ ಯಾಕೆ ಅನಿಸ್ತು. ಸರಿ ಆಯ್ತು ಅಂದ್ಕೊಂಡ. ಮತ್ತೊಂದು ಕ್ಷಣದಲ್ಲಿ ನನಗಾಗಿ ಇಷ್ಟೊಂದು ಕಷ್ಟ ಪಟ್ಟ ತಂದೆತಾಯೀನ ಒಂದು ಸುಸ್ಥಿತಿಗೆ ತಲುಪಿಸ್ಬೇಕು. ಹಂಗಾಗಿ ನಾನು ವಿದ್ಯಾಭ್ಯಾಸ ಮುಗಿಸಿ ಕೆಲ್ಸ ಹಿಡಿದು ಕೆಲ ವರ್ಷದವರೆಗೂ ಸಾಯೋಲ್ಲ ಅಂದ್ಕೊಂಡ. ಮತ್ತೊಂದು ಕ್ಷಣದಲ್ಲಿ ಮತ್ತೊಂದು ಆಲೋಚನೆ ಮೂಡಿತು. ನನ್ನ ಹುಟ್ಟುಸ್ತಾ ನೀನು ಹುಟ್ಟುತೀಯೇನಪ್ಪಾ ಅಂತ ಕೇಳೇನೂ ದೇವ್ರು , ಅಪ್ಪ ಅಮ್ಮ ಹುಟ್ಟುಸ್ಲಿಲ್ಲ. ಹಾಗಾಗಿ ನಾನು ಸಾಯೋವಾಗ ಅವ್ರಿಗೆ ಕೇಳದೇ ಹೇಗೆ ಸಾಯ್ಲಿ ? ಅವ್ರಾಗೇ ಸಾಯಿಸೋವರ್ಗೂ ಅಥವಾ ಸಾಯಿ ಅಂತ ಹೇಳೋವರ್ಗೂ ಸಾಯೋ ನೈತಿಕ ಹಕ್ಕು ನನಗಿಲ್ಲ ಅಂದ್ಕೊಂಡ. ಅಷ್ಟಕ್ಕೂ ಪ್ರೀತಿ ಸಿಗಲಿಲ್ಲ ಅಂತೇಕೆ ಅಂದ್ಕೋಬೇಕು. ಅವಳು ರಜಾ ಮುಗಿದ ಮೇಲೆ ಸಿಕ್ಕಿದ್ರೂ ಸಿಗಬಹುದು. ಒಂದೊಮ್ಮೆ ಅವಳು ಅವಳಿಷ್ಟದಂತೆಯೇ ಕೋರ್ಸ್ ಬಿಟ್ಟು ಬೇರೆಡೆ ಹೋಗಿದ್ದರೂ ತೊಂದರೆಯೇನಿಲ್ಲ. ಕನಸುಗಳ ಕೊಂದು ಬದುಕೋದೂ ಒಂದು ಬದುಕೆ ? ಒಂದೊಮ್ಮೆ ಅವಳು ಅಲ್ಲೇ ಇದ್ದು, ನಿನ್ನ ಪ್ರೀತಿಸೊಲ್ಲ ಅಂದರೆ ? ಅಂದರೇನಾಯ್ತು ? ಪ್ರೀತಿ ಜೀವನದ ಒಂದು ಭಾಗವೇ ಹೊರತು ಪ್ರೀತಿಯೇ ಜೀವನವಲ್ಲವಲ್ಲ. ಏನಾದರಾಗಲಿ , ನಾಳೆಯನ್ನು ನಾಳೆ ನೋಡೋಣ ಇವತ್ತಿನದು ಇವತ್ತಿಗೆ ಅಂತ ಎದ್ದು ಮನೆಯತ್ತ ಹೆಜ್ಜೆ ಹಾಕಿದ. ಕೆರೆಯಲ್ಲಿ ಈಜುತ್ತಿದ್ದ ಚಂದ್ರ ನಗುತ್ತಿದ್ದ.

Tuesday, October 15, 2013

ಅನಿರೀಕ್ಷಿತ


ನಗರದ ದೊಡ್ಡ ಆಸ್ಪತ್ರೆ ಎಂದೇ ಖ್ಯಾತ ಜಗರಾಂ ಆಸ್ಪತ್ರೆಯ ಡಾ|| ಜಗರಾಂಗೆ ರಾತ್ರಿ ನಿದ್ದೆಯಲ್ಲೆಲ್ಲಾ ಏನೋ ಕಸಿವಿಸಿ. ನಿದ್ದೆಯಲ್ಲೆಲ್ಲಾ ಮೈಮೇಲೆ ಬಿದ್ದಂತೆ ಬಂದು ಕಾಡಿದ ದುಸ್ವಪ್ನಗಳಿಂದ ನಾಳೆ ಏನೋ ಗಂಡಾಂತರ ಕಾದಿದೆ ಎಂದೇ ಅಂಜಿಕೆ ಶುರುವಾಯ್ತು. Dreams are modified versions of memory ಎನ್ನುತ್ತಾರೆ. ಅಂದರೆ ನಾವು ನೋಡಿದ್ದು, ಯೋಚಿಸಿದ್ದೇ ರೂಪಾಂತರವಾಗಿ ಕನಸಾಗುತ್ತೆ ಅಂತ.. ಆದರೆ ತಾವು ನೋಡದ್ದು ಯಾಕೆ ಕನಸಾಗ್ತಿದೆ ಅಂತ ನಿದ್ದೆ ಬಾರದೇ ಎದ್ದು ಕುಳಿತ ಜಗರಾಂ ಯೋಚಿಸುತ್ತಾ ಕುಳಿತು ,ಕುಳಿತಲ್ಲಿಯೇ ತೂಕಡಿಸಿ ಅಲ್ಲೇ ನಿದ್ದೆ ಹತ್ತಿ ಅವರಿಗೆ ಇದ್ಯಾವುದರ ಅರಿವಾಗೋದ್ರೊಳಗೇ ನಸುಕಾಯ್ತು..

*******
ಸರ್, ಈ ಗೋಡೌನ್ ನಾನು ವಾಚ್ಮನ್ನಾದಾಗಿಂದ ಮುಚ್ಚೇ ಇದೆ ಸರ್. ನೋಡಿ ಬೀಗ ಕೂಡ ಹಾಕಿದೆ.. ಇದ್ರ ಕೀ ಎಲ್ಲಿದೆ ಅಂತ್ಲೂ ಗೊತ್ತಿಲ್ಲ ಸಾರ್..  ಅಂತ ರಾಗ ಎಳೀತಿದ್ದ ವಾಚ್ಮನ್ನಿನ ಮಾತನ್ನು ಅರ್ಧದಲ್ಲೇ ತಡೆದ ಇನ್ಸಪೆಕ್ಟರ್ ವಿನೀತ್. "ರೀ,  ಹೆಚ್ಗೆ ಮಾತು ಬೇಡ. ಈಗಾಗ್ಲೇ ನಾಲ್ಕು ಗೌಡೌನ್ ಬಾಗ್ಲು ತೆಗ್ದು ತೋರ್ಸಿದೀಯ. ಇದ್ರ ಬಾಗಿಲು ತೆಗ್ಯೋಕೆ ಯಾಕಿಷ್ಟು ಪಿರಿಪಿರಿ ?. ಬೇಗ ತೆಗೀರಿ  ಬಾಗ್ಲು ..ಎಂದ್ರು ತಮ್ಮ ಎಂದಿನ ಪೋಲೀಸ್ ಗತ್ತಿನಲ್ಲೇ.
ಹೌದು ಸರ್.. ಇದು ನಮಗೆ ಗೊತ್ತಿರೋ ಮಟ್ಟಿಗೆ ಯಾವಾಗಿಂದ್ಲೂ ಮುಚ್ಚೇ ಇದೆ ಅಂದ್ಲು ರಾಗಿಣಿ... ಏ, ನಿನ್ನ ಕೀ ಗೊಂಚಲು ಕೊಡಪ್ಪ. ನಾನೇ ತೆಗೀತೀನಿ ಅಂತ ಇನಸ್ಪೆಕ್ಟರ್ರೇ ಬಂದಾಗ ಬೇಡ ಸರ್ ನಾನೇ ಟ್ರೈ ಮಾಡ್ತೀನಿ ಅಂತ ವಾಚ್ಮನ್ನೇ ಬೀಗ ತೆಗಿಯೋಕೆ ಮುಂದೆ ಬಂದ. ವಾಚ್ಮನ್ ಒಂದೊಂದೇ ಕೀಯನ್ನು ಹಾಕಿ ತೆಗಿಯೋಕೆ ಪ್ರಯತ್ನ ಪಡ್ತಾ ಇದಾನೆ. ಆದ್ರೆ ಬರ್ತಾ ಇಲ್ಲ. ಈ ವ್ಯರ್ಥ ಪ್ರಯತ್ನಗಳ ನಡುವೆ ರಾಗಿಣಿಗೆ ಇಂದು ಬೆಳಗ್ಗೆಯ ಅನಿರೀಕ್ಷಿತ ಘಟನೆ ನೆನಪಾಯ್ತು. ಬೆಳಬೆಳಗ್ಗೆಯೇ ಆಸ್ಪತ್ರೆಗೆ ಪೋಲಿಸ್ರು ಬಂದಿದಾರೆ.ಸಾಧಾರಣವಾಗಿ  ಆಕ್ಸಿಡೆಂಟ್ ಕೇಸುಗಳ ವಿಚಾರಣೆಗೆ ಅಂತ ಪೋಲಿಸ್ರು ಬರ್ತಿದ್ರೂ ಬೆಳಬೆಳಗ್ಗೆಯೇ ಬರ್ತಿರಲಿಲ್ಲ. ಬಂದವ್ರು ಜಗರಾಂರನ್ನೋ ಇಲ್ಲ ಅವರ ಇನ್ಚಾರ್ಚ್ ಆಗಿದ್ದ ರಾಗಿಣಿಯವರನ್ನೋ ಭೇಟಿಯಾಗೇ ಹೋಗ್ತಿದ್ರು. ಆದ್ರೆ ಈ ಸಲ ಯಾರ್ನೂ ಭೇಟಿಯಾಗದೇ ಸೀದಾ ಆಸ್ಪತ್ರೆಯ ಸೆಕ್ಯೂರಿಟಿ ಸಿಬ್ಬಂದಿಯನ್ನ ವಿಚಾರಣೆ ಮಾಡ್ತಾ ಇದ್ದಾರೆ ಅನ್ನೋ ಸುದ್ದಿ ತಿಳಿದ ರಾಗಿಣಿಗೆ ಏನೋ ಎಡವಟ್ಟಾಗಿದೆ ಅನಿಸೋಕೆ ಶುರು ಆಗಿ ತಕ್ಷಣ ಪೋಲಿಸರಿದ್ದ  ಜಾಗಕ್ಕೆ ಓಡಿ ಬಂದಿದ್ರು. ಅವರು ಬರೋ ಹೊತ್ತಿಗೆ ಪೋಲಿಸ್ರು ಗೇಟಿಂದ ಸೀದಾ ಆಸ್ಪತ್ರೆ ಆವರಣದ ಮೂಲೆಯಲ್ಲಿದ್ದ ಗೋಡೌನಿನ ಹತ್ರ ಬಂದಿದ್ರು.  ಎಲ್ಲಾ ಬಿಟ್ಟು ಈ  ಗೋಡೌನುಗಳನ್ನ ಯಾಕೆ ಹುಡುಕ್ತಾ ಇದ್ದಾರೆ ಅನ್ನೋ ಕುತೂಹಲದಲ್ಲೇ ಕಳೆದು ಹೋಗಿದ್ದ ರಾಗಿಣಿ ಕೀಗಳ ಸೌಂಡಿಂದ ಮತ್ತೆ ವಾಸ್ತವಕ್ಕೆ ವಾಪಾಸಾದ್ರು.

ವಾಚ್ಮನ್ನಿನ ಕೀ ಬಂಚಿನ ಕೀಗಳೆಲ್ಲಾ ಮುಗೀತಾ ಬಂದಿದ್ವು. ಯಾವುದ್ರಲ್ಲೂ ಬೀಗ ತೆಗೆಯೋ ತರ ಕಾಣ್ತಿರಲಿಲ್ಲ. ಇನಸ್ಪೆಕ್ಟರ್ ಆ ಬಾಗಿಲನ್ನೇ ಹಾಗೇ ನೋಡ್ತಾ ಇದ್ರು. ಸುಮಾರು ಹೊತ್ತಿನಿಂದ ಹಾಗೇ ನೋಡ್ತಾ ಇದ್ದ ಅವರಿಗೆ ಬಾಗಿಲಲ್ಲಿ ಏನೋ ಬದಲಾವಣೆ ಇದೆ ಅನಿಸ್ತಾ ಇತ್ತು. ಆದ್ರೆ ಏನು ಅಂತ ಗೊತ್ತಾಗ್ತಾ ಇರ್ಲಿಲ್ಲ.ತನ್ನಲ್ಲಿದ್ದ ಕೀಗಳೆಲ್ಲಾ ಮುಗೀತು ಅಂತ ವಾಚ್ಮನ್ನು ಹೇಳೋ ಮೊದಲೇ ಹೋಗ್ಲಿ ಬಿಡು, ನೀನು ನಿಜನೇ ಹೇಳ್ತಿದೀಯ. ಇದ್ರ ಬೀಗದ ಕೀ ನಿನಗೆ ಕೊಟ್ಟಿಲ್ಲ ಅವ್ರು ಅಂತ ಹೇಳಿದ್ರು ವಿನೀತ್.. ಏನನ್ನೋ ಲೆಕ್ಕ ಹಾಕಿದವರಂತೆ. ಬಾಗಿಲು ಡೋರ್ ಲಾಕ್ ಮಾಡುವಂತಹ ಒಂದೇ ದಿಮ್ಮಿಯ ಬಾಗಿಲಾಗಿರದೇ, ಚೀಲಕ ಹಾಕಿ ಬೀಗ ಹಾಕುವಂತಹ ಎರಡು ದಿಮ್ಮಿಗಳ ಬಾಗಿಲಾಗಿತ್ತು. ಬೀಗ ಎಷ್ಟೇ ಬಲವಾಗಿದ್ದಾದ್ರೂ ಸ್ವಲ್ಪ ಮಧ್ಯದಲ್ಲಿ ತಳ್ಳಿದ್ರೆ ಬಾಗಿಲು ಮಧ್ಯದಲ್ಲಿ ಸ್ವಲ್ಪ ಹಿಂದೆ ಹೋಗಿ ಮತ್ತೆ ಸ್ವಸ್ಥಾನಕ್ಕೆ ಬಂದು ಕೂರತ್ತೆ. ಆದ್ರೆ ಇಲ್ಲಿ ಹಾಗಾಗ್ಲಿಲ್ಲ. ಮತ್ತೊಮ್ಮೆ ಸ್ವಲ್ಪ ಬಲ ಹಾಕಿ ತಳ್ಳಿದ್ರು. ಊಹೂಂ. ಏನೂ ಚಲನೆಯಿಲ್ಲ. ಮೂರನೇ ಬಾರಿ ತಳ್ಳಿ ಬೇಜಾರಾದ ಇನ್ಸಪೆಕ್ಟರ್ ಮುಂದೇನು ಎಂಬಂತೆ ಬಾಗಿಲಿನ ಎಡಹೊಸ್ತಿಲಿಗೂ, ಬಾಗಿಲಿಗೂ ತಾಗುವಂತೆ ಒರಗಿದ್ರು. ಏನೋ ಸರಿದಂತಾಯ್ತು. ಆದ್ರೆ ಏನು ಅಂತ ಸರಿಯಾಗಿ ಗೊತ್ತಾಗ್ಲಿಲ್ಲ. ಈ ಬಾರಿ ಬಾಗಿಲಿನ ಎಡಮೂಲೆಯಲ್ಲಿ ತಳ್ಳಿದಾಗ ಬಾಗಿಲು  ಎಡಕ್ಕೆ ಸ್ವಲ್ಪ ತೆರೆಯಿತು ! ಈ ಸಲ ಎಡಭಾಗದಲ್ಲಿ ಮತ್ತಷ್ಟು ಬಲ ಹಾಕಿ ಒತ್ತಿದಾಗ ಕಿರ್ರೆಂಬ ಶಬ್ದದೊಂದಿಗೆ ಇನ್ನೊಂದು ಸ್ವಲ್ಪ ಜರುಗಿತು !!  ಬಾಗಿಲು ಒಂದು ದಿಮ್ಮಿಯ ಡೋರ್ಲಾಕಿನ ಬಾಗಿಲಿನಂತೆ ಒಂದು ಭಾಗದಿಂದ ತೆಗೆಯುವಂತಹದ್ದೆ. ಆದ್ರೆ ನೋಡೋರನ್ನ ಕನಫ್ಯೂಸ್ ಮಾಡುವಂತೆ ಎರಡು ದಿಮ್ಮಿಯ ಹೊರರಚನೆ ಮಾಡಿ ಅದನ್ನು ಬಲಪಡಿಸುವಂತೆ ಅದಕ್ಕೆ ಡಮ್ಮಿ ಬೀಗವನ್ನೂ ಹಾಕಿದ್ದಾರೆ !. ಯಾವುದೇ ಬೀಗವನ್ನೂ ಹಾಕದೇ ಎಡಹೊಸ್ತಿಲಿನ ಯಾವುದೋ ಭಾಗವನ್ನು ಒತ್ತಿದರೆ ತಾನಾಗೇ ಒಳಗಿರೋ ಬೀಗ ತೆಗೆಯುವಂತೆ.. ಅಬ್ಬಾ ಎಂತಹ ಮಾಸ್ಟರ್ ಮೈಂಡ್ ಅಂದ್ಕೊಂಡ್ರು ವಿನೀತ್. ಆದ್ರೆ ಯಾಕೆ ? ಒಂದು ಆಸ್ಪತ್ರೆಯ ಸಾಮಾನ್ಯ ಗೋಡೌನಿಗೆ ಇಷ್ಟೆಲ್ಲಾ ಭದ್ರತೆ ಯಾಕೆ...?

*************
ಶನಿವಾರ ರಾತ್ರೆ ಕುಡಿದ ಅಮಲಿನಲ್ಲಿ ಫ್ಲೈ ಓವರ್ ಕೆಳಗೆ ಮಲಗಿದ್ದ ಜನರ ಮೇಲೆಲ್ಲಾ ಗಾಡಿ ಓಡಿಸಿ ಅದೆಷ್ಟೋ ಜನರ ಜೀವ ತೆಗೆದ ಇನ್ನು ಕೆಲವರನ್ನು ಅರ್ಧ ಜೀವ ಮಾಡಿದ ಯಾವುದೋ ಶ್ರೀಮಂತ ಮನೆಯ ಹುಡುಗ ಕಾರಿನೊಂದಿಗೆ ಪರಾರಿಯಾಗಿದ್ದ. ಅರ್ಧ ಜೀವವಾಗಿ ನರಳುತ್ತಿದ್ದ ಜನರನ್ನು ಎಷ್ಟು ಹೊತ್ತಿನ ನಂತರವೋ ನೋಡಿದ ಯಾರೋ ಪುಣ್ಯಾತ್ಮರು ಹತ್ತಿರದಲ್ಲೇ ಇದ್ದ ಆಸ್ಪತ್ರೆಗೆ ಸೇರಿಸಿದ್ದರು. ಮಾರನೇ ದಿನ ಬೆಳಗಾಗೋ ಹೊತ್ತಿಗೆ ಈ ನತದೃಷ್ಟರೂ ಸಹ ಇಹಲೋಕ ತ್ಯಜಿಸಿ ಪರಲೋಕದಲ್ಲಿದ್ದ ತಮ್ಮ ಕುಟುಂಬದವರನ್ನು ಸೇರಿದ್ದರು. ಕುಟುಂಬಕ್ಕೆ ಕುಟುಂಬವೇ ಖಾಲಿಯಾಗಿ ಗೋಳಿಡುವವರು ಯಾರೂ ಇಲ್ಲದಿದ್ದರೂ ಈ ಸಾವುಗಳಿಂದ ಕೆಲವು ಜೀವಗಳಿಗೆ ಮಾತ್ರ ಅಮಿತಾನಂದವಾಗಿತ್ತು !!

*********

ಬಾಗಿಲು ತೆಗೆದು ಒಳಗೆ ಕಾಲಿಟ್ಟ ಇನಸ್ಪೆಕ್ಟರ್ ಮತ್ತು ತಂಡದವರು ಎದುರು ಕಂಡ ದೃಶ್ಯದಿಂದ ದಂಗಾಗಿ ಹೋದರು. ಎದುರಿಗೆ ಸಣ್ಣ ಗೋಡೌನಿನಂತೆ ಕಾಣೋ ಕೋಣೆಯೊಳಗೆ ಹೋದಂತೆ ಒಳಗೆ ತೆರೆದುಕೊಂಡ ದೊಡ್ಡ ಹಾಲು. ಹಾಲು ಅಲ್ಲಲ್ಲ ಹಾಲಾಹಲಕ್ಕೆ ತುತ್ತಾಗಿ ಸಾಲಾಗಿ ಮಲಗಿದಂತಹ ಮುಗ್ದ ಜೀವಗಳ ಸಾಲುಗಳು. ಅರ್ಥಾತ್ ಅದೊಂದು ಶವಾಗಾರ. ಆದರೆ ಶವಾಗಾರಕ್ಕೆ ಇಷ್ಟೆಲ್ಲಾ ಗೌಪ್ಯತೆ ಏಕೆ ಎಂದು ಅರ್ಥ ಆಗಲಿಲ್ಲ. ಅಲ್ಲಿದ್ದ ಕವಾಟಗಳನ್ನೆಲ್ಲಾ ಜಾಲಾಡುವಂತೆ, ಎಲ್ಲಾದರೂ ಇನ್ನೂ ಹೆಚ್ಚು ಗುಪ್ತ ಕೋಣೆಗಳಿಗೆ ದ್ವಾರಗಳಿರಬಹುದಾಗ ಬಗ್ಗೆಯೂ ಸೂಕ್ಷ್ಮವಾಗಿ ಜಾಲಾಡುವಂತೆ ತಮ್ಮ ತಂಡದ ಕೆಲ ಸಿಬ್ಬಂದಿಗೆ ಆದೇಶವಿತ್ತ ಇನ್ಸ್ಪೆಪೆಕ್ಟರ್ ಶವಗಳಿದ್ದ ಜಾಗಕ್ಕೆ ನಡೆದರು. ಒಂದು ಶವದ ಮೇಲಿದ್ದ ಬಟ್ಟೆಯನ್ನು ತೆಗೆದ ಧೈರ್ಯಶಾಲಿ ಇನ್ಸಪೆಕ್ಟರಿಗೂ ಒಮ್ಮೆ ಮುಖ ಕಿವುಚಿ ಹೋಯ್ತು. ಅದರ ಮೈಮೇಲೆಲ್ಲಾ ಹೊಲಿಗೆಗಳು!! ಕೊನೆಗೆ ಎಲ್ಲಾ ಪೋಸ್ಟಮಾರ್ಟಮ್ !!! ನೋಡನೋಡುತ್ತಿದ್ದಂತೆಯೇ ಇನ್ಸಪೆಕ್ಟರಿಗೆ ಅಲ್ಲಿ ನಡೆಯುತ್ತಿದ್ದ ಅವ್ಯವಹಾರಗಳ ಸುಳಿವು ಸಿಕ್ಕಿ ಹೋಯ್ತು..

*************
ಮಾರನೇ ದಿನ ನಗರದ ಪೇಪರುಗಳಲ್ಲೆಲ್ಲಾ ಒಂದೇ ಸುದ್ದಿ. ಡಾ|| ರಾಗಿಣಿಯವರ ಆಸ್ಪತ್ರೆಯ ಮೇಲೆ ದಾಳಿ. ಡ್ರಗ್ಸ್ ಮಾಫಿಯಾ ಮತ್ತು ಅಂಗಾಂಗ ಮಾರಾಟ ಜಾಲದಲ್ಲಿ ಭಾಗಿಯಾಗಿದ್ದ ರಾಗಿಣಿ ಆಸ್ಪತ್ರೆಯ ರಹಸ್ಯತಾಣವಾಗಿದ್ದ ಒಂದು ಗೋಡೌನನ್ನು ಪತ್ತೆ ಹಚ್ಚುವಲ್ಲಿ ಮುಖ್ಯ ಪಾತ್ರವಹಿಸಿದ ಆಸ್ಪತ್ರೆಯ ವಾಚ್ಮನ್ ಜಗರಾಂಗೆ ಪೋಲಿಸರ ಪ್ರಶಂಸೆ...ಮುಖ್ಯಮಂತ್ರಿಗಳಿಂದ ವಾಚ್ನನ್ ಜಗರಾಂ ಅವರಿಗೆ ಮತ್ತು ಪೋಲಿಸ್ ತಂಡದ ಈ ಸಾಹಸಕ್ಕೆ ೧ ಲಕ್ಷ ರೂಗಳ ಬಹುಮಾನ ಘೋಷಣೆ..

Monday, October 7, 2013

ಮೈಸೂರು ದಸರಾ..



ಮೈಸೂರು ದಸರಾ. ಎಷ್ಟೊಂದು ಸುಂದರ.. ಎಂಬ ಹಾಡನ್ನು ಕೇಳಿದ್ನೇ ಹೊರತು ಅದ್ನ ಕಣ್ಣಾರೆ ನೋಡೋ ಭಾಗ್ಯ ಇತ್ತೀಚೆಗಿನವರೆಗೂ ಸಿಕ್ಕಿರಲಿಲ್ಲ. ತೀರಾ ಸಣ್ಣವನಿದ್ದಾಗ ನನ್ನಪ್ಪ, ನನ್ನ ಮುತ್ತಜ್ಜ(ಅಜ್ಜಿಯ ಅಪ್ಪ) ಮೈಸೂರು ದಸರಾಕ್ಕೆ ಹೋದ ಕತೆ, ಅಲ್ಲಿ ನನ್ನ ಮುತ್ತಜ್ಜನ ಒಳಜೇಬನ್ನೇ ಕತ್ತರಿಸಿದ ಕಳ್ಳರ ಕಥೆ , ಮೈಸೂರಿಗೆ ದಸರಾ ಸಮಯದಲ್ಲಿ ಹೋದ್ರೆ ಕಾಲಿಡೋಕೂ ಆಗಲ್ಲ ದಸರಾನಾ ರಸ್ತೆ ಮೇಲೆ ನೋಡೋದು ಹೋಗ್ಲಿ ಮನೆ ಮಹಡಿ ಮೇಲೆ ನಿತ್ತು ನೋಡೋದಕ್ಕೂ ಕಷ್ಟಪಡ್ಬೇಕು ಎಂಬ ಮಾತುಗಳೇ ದಸರಾಕ್ಕೆ ಹೋಗದಂತೆ ತಡೀತಿದ್ವಾ ಅಥವಾ  ಕಣ್ಣಾರೆ ನೋಡಿದ್ದಕ್ಕಿಂತಲೂ ಹೆಚ್ಚಿಗೆ ತುಂಬಿಹೋಗಿದ್ದ ಊಹಾಪೋಹಗಳೇ ತಡೀತಿದ್ವಾ ಗೊತ್ತಿಲ್ಲ. ದಸರಾ ಎಂದರೆ ಮುಂಚೆ ಮಹಾರಾಜರು ಆನೆಯ ಮೇಲೆ ಕುಳಿತು ನಡೆಸುತ್ತಿದ್ದ ಮೆರವಣಿಗೆ ಆಮೇಲೆ ಅದರ ಬದಲು ದೇವಿ ಚಾಮುಂಡೇಶ್ವರಿಯ ಮೆರವಣಿಗೆ ನಡಿಯುವಂತಹ ವಿಜಯದಶಮಿಯ ದಿನ ಸಿಕ್ಕಾಪಟ್ಟೆ ರಷ್ಷಿರುತ್ತೆ. ಬೇರೆ ಸಂದರ್ಭದಲ್ಲೂ ಇರತ್ತೆ ಆದ್ರೆ ನೋಡ್ಬೋದು ಕಣ್ರೋ . ಬೆಂಗ್ಳೂರಲ್ಲೇ ಇದ್ದು ಮೈಸೂರು ದಸರಾ ನೋಡಕಾಗ್ಲಿಲ್ಲ ಅಂದ್ರೆ ಹೆಂಗೆ ಅಂದ ಗೆಳೆಯರ ಮಾತಿಗೆ ಒಪ್ಪಿ ನಮ್ಮ ಗ್ಯಾಂಗು ಕೊನೆಗೂ ಮೈಸೂರಿಗೆ ಹೊರಟಿತು. ಮತ್ತೊಂದು ದಸರಾ ಬರ್ತಿರೋ ಸಂದರ್ಭದಲ್ಲಿ ಅರಮನೆ ದೀಪಾಲಂಕಾರ, ಕೆಆರೆಸ್ಸು, ಚಾಮುಂಡಿ ಬೆಟ್ಟಗಳ ಸುಂದರ ನೆನಪುಗಳದೇ ಅಂಬಾರಿ.. ಹಾಗಾಗಿ ಅವೇ ನೆನಪುಗಳ್ನ ದಾಟಿಸೋ ಪ್ರಯತ್ನ ಬಾರಿ.

Mysore palace
ಮೈಸೂರು ಅರಮನೇನ ನೋಡ್ಬೇಕು. ಸರಿ, ಅದ್ರಲ್ಲಿ ಏನು ನೋಡ್ಬೇಕು ? ಅರೆ, ಇದೊಳ್ಳೆ ಪ್ರಶ್ನೆ ಆಯ್ತಲ್ಲ ಅಂದ್ಕೊಂಡ್ರಾ ? ಇದು ದಸರಾ ಸಮಯ ಸ್ವಾಮಿ. ಹಾಗಾಗಿ ಕೇಳ್ಬೇಕಾದ ಪ್ರಶ್ನೆನೆ. ದೀಪಾಲಂಕಾರ ನೋಡ್ಬೇಕು ಅಂದ್ರೆ ಸಂಜೆ /ರಾತ್ರಿ ಬರ್ಬೇಕು.  ಅರಮನೆ ಒಳಗಡೆ ನೋಡ್ಬೇಕು ಅಂದ್ರೆ ಬೆಳಗ್ಗೆ ಹೊತ್ತು ಬರ್ಬೇಕು. ಅರಮನೇನ ಯಾವಾಗಾದ್ರೂ ನೋಡ್ಬೋದು. ಆದ್ರೆ ದೀಪಾಲಂಕಾರ ನೋಡ್ಲೇಬೇಕು ಅಂತ ಎಲ್ರೂ ಮಾತಾಡ್ಕೊಂಡ್ವಿ. ಸರಿ ಬೆಳಗ್ಗೆ ಏನ್ಮಾಡೋದು ಅಂತ ಮಾತಾಡ್ತಿರೋವಾಗ್ಲೇ ಮೈಸೂರು ಬರೋದಕ್ಕೂ ಚಾಮುಂಡಿ ಬೆಟ್ಟ ಸ್ವಾಗತ ಕೋರ್ತಿರೋ ತರಾ ಕಾಣೋದಕ್ಕೂ ಸರಿ ಹೋಯ್ತು . ಮೈಸೂರು ಮುಟ್ಟಿ ಒಂದು ಹಂತದ ತಿಂಡಿ ಮುಗ್ಸೋ ಹೊತ್ತಿಗೆ ಮೊದ್ಲು ಚಾಮುಂಡಿ ಬೆಟ್ಟ ನೋಡೋದಂತ್ಲೂ ಆಮೇಲೆ ಸಂಜೆಗೆ ದೀಪಾಲಂಕಾರ ನೋಡೋಂದಂತ್ಲೂ ಪ್ಲಾನ್ ಮಾಡಿದ್ವಿ. ಆದ್ರೆ ಬೆಂಗ್ಳೂರಿಂದ ಬಂದ ಎಲ್ಲ ಗೆಳೆಯರ ಕೈಲೂ ಬ್ಯಾಗುಗಳು. ಬ್ಯಾಗು ಹೊತ್ಕೊಂಡು ತಿರುಗೋದೇಗೆ ? ಮೈಸೂರಿನ ನಂಬನಿ(ನಂದಿ ಬಸ್ ನಿಲ್ದಾಣ)ದಲ್ಲಿ ವಿಚಾರಿಸಿದ್ರೆ ಅಲ್ಲೆಲ್ಲೂ ಇಲ್ಲ ಅಂತದ್ರೂ. ನಾವು ಇಳಿದ ರೈಲ್ವೇ ಸ್ಟೇಷನ್ನಿನಲ್ಲೇ ಕೇಳಿದ್ರೆ ಅಲ್ಲೇ ಇಡ್ಬೋದಿತ್ತೇನೋ. ಆದ್ರೆ ಮೈಸೂರು ತಿರ್ಗೋ ಹುಮ್ಮಸ್ಸಲ್ಲಿ ಸೀದಾ ನಂಬನಿಗೆ ಬಂದು ಬಿಟ್ಟಿದ್ವಲ್ಲ. ವಾಪಾಸು ಹೋಗೋ ಮನಸ್ಸಿಲ್ಲದೇ ಗೆಳೆಯನ ನೆಂಟರ ಮನೆಗೆ ಹೊರಟ್ವಿ. ಅಲ್ಲಿ ಬ್ಯಾಗಿಟ್ಟು ಮತ್ತೆ ವಾಪಾಸ್ಸು ಬರೋ ಹೊತ್ತಿಗೆ ಸಾಕಷ್ಟು ಸಮಯ ಹಾಳಾಗಿತ್ತಾದ್ರೂ ನಮ್ಮ ಹುಮ್ಮಸ್ಸು ಕಿಂಚಿತ್ತೂ ಕಮ್ಮಿಯಾಗಿರ್ಲಿಲ್ಲ.

mahishasura at chamundi hills
ಚಾಮುಂಡಿಬೆಟ್ಟಕ್ಕೆ ಹವಾನಿಯಂತ್ರಿತ ಬಸ್ಸುಗಳೂ, ಸೀದಾ ಬಸ್ಸುಗಳು ಇವೆ ಅಂತ ನಾನು ಬರ್ಯೋಕೆ ಹೋದ್ರೆ ನಿಮ್ಮಲ್ಲಿ ಅನೇಕರೆಲ್ಲಾ ಸೇರಿ ನನಗೆ ಹೊಡ್ಯೋಕೆ ಬರ್ಬೋದು!! ಅದು ಎಲ್ಲರಿಗೂ ಗೊತ್ತಿರೋ ವಿಷಯನೇ ಹೊಸದೇನಿದ್ರೂ ಇದ್ರೆ ಹೇಳು ಅಂತ ಕೇಳೋ ಮೊದ್ಲೆ ಹೇಳ್ಬಿಡ್ತೇನೆ. ಚಾಮುಂಡಿಬೆಟ್ಟಕ್ಕೆ ಬಸ್ಸಲ್ಲಿ ಹೋಗೋಕಿಂತಲೂ ನಡ್ಕೊಂಡೋ,ಸ್ವಂತ ವಾಹನವೇನಾದ್ರೂ ಇದ್ರೆ ಅದ್ರಲ್ಲಿ ಹೋಗೋದು ಒಳ್ಳೇದು ಅನ್ಸತ್ತೆ. ಯಾಕಂದ್ರೆ ರಸ್ತೆಯಲ್ಲಿ ಸಿಗೋ ಅಸಂಖ್ಯ ಹಳದಿ, ಕೆಂಪು, ನೀಲಿ ಹೂಗಳು, ಸುಂದರ ದೃಶ್ಯಾವಳಿ ಕ್ಯಾಮೆರಾ ಹೊತ್ತು ತಂತಿದ್ದ ನನ್ನ ಸ್ನೇಹಿತರು ಕರಬುವಂತೆ ಮಾಡ್ತಿದ್ವು. ಚಲಿಸೋ ಬಸ್ಸಿನಲ್ಲಿ ದೃಶ್ಯಗಳ ಸೆರೆ ಹಿಡಿಯಲಾರದೇ, ದೃಶ್ಯಗಳು ಮಿಸ್ಸಾಗುವುದನ್ನೂ ಬಿಡಲೂ ಆಗದೇ ಅವರು ಪರದಾಡುತ್ತಿದ್ದರೆ ಕ್ಯಾಮೆರಾಗಳಿಲ್ಲದ ನಮ್ಮಂತವರು ನಿರ್ಲಿಪ್ತರಾಗಿ ಪ್ರಕೃತಿಯನ್ನು ಆನಂದಿಸಲೂ ಆಗದೇ, ಬಾಲ್ಯ ಸ್ನೇಹಿತರನ್ನು ಬೈದು ಸುಮ್ಮನಿರಿಸಲೂ ಆಗದಂತಹ ದ್ವಂದ್ವದಲ್ಲಿ ಸಿಕ್ಕಿದ್ದೆವು. ಬರೋ ಹೊತ್ತಿಗಾದ್ರೂ ನಡೆದೇ ಬರ್ಬೇಕು ಅಂತ ನಿಶ್ಚಯಿಸಿದ್ವಿ. ಪ್ರಧಾನ ದೇಗುಲದ ಹೊರಗೆ ಜಿನುಗುತ್ತಿದ್ದ  ಮಳೆಯಲ್ಲಿ ಅರ್ಧಘಂಟೆ ನೆನೆಯುತ್ತಲೇ ದೇವರ ದರ್ಶನ ಪಡೆದು  ಮಹಿಷಾಸುರನೆದ್ರು ನಿಂತು ಫೋಟೋ ತೆಗೆಸಿ ನಂದಿಯನ್ನು ನೋಡಲು ಹೊರಟೆವು.  ಚಾಮುಂಡಿ ಬೆಟ್ಟಕ್ಕೆ ಕೆಳಗಿನಿಂದ ಹತ್ತಿದ್ರೆ ಸುಮಾರು ಸಾವಿರ ಮೆಟ್ಟಿಲು. ಅದರ ಸುಮಾರು ಮುಕ್ಕಾಲು ಭಾಗ ಅಂದ್ರೆ ಏಳು ನೂರು ಐವತ್ತು  ಹತ್ತಿದ್ರೆ ಸಿಕ್ಕೋದು ನಂದಿ. ನಾವು ಚಾಮುಂಡಿಬೆಟ್ಟದಿಂದ ಕೆಳಗೆ ಅವೇ ಇನ್ನೂರ ಐವತ್ತು ಮೆಟ್ಟಿಲಿಳಿದು ನಂದಿ ನೋಡೋಕೆ ಹೊರಟ್ವಿ. ಕಡುಗಪ್ಪು ನಂದಿ ನೋಡೋಕೆ ದಸರಾ ಇರ್ಲಿ ಇಲ್ಲದಿರಲಿ ಜನಜಂಗಳಿಯೆ. ಇಷ್ಟು ದೊಡ್ಡವನಿರೋ ನಾನೇ ತಣ್ಣಗೆ ಕೂತಿದ್ದೇನೆ , ನನ್ನ ಕಾಲು ಭಾಗವೂ ಇಲ್ಲದ ಹುಲುಮಾನವ ನೀನು. ಎಷ್ಟು ಹಾರಾಡ್ತೀಯಪ್ಪ ನೀನು ಅಂತ ನಂದಿ ಮಾತಾಡ್ತಿದೆಯೋ ಅನಿಸಿತೊಮ್ಮೆ !  

Nandi at chamundi hill
ನಂದಿಗೆ ನಮಸ್ಕರಿಸಿದ ನಮಗೆ ಎರಡು ಆಯ್ಕೆ. ಒಂದು ವಾಪಾಸು ಮೇಲೆ ಹತ್ತೋದು. ಇಲ್ಲಾ ಚಾಮುಂಡಿಬೆಟ್ಟದ ಕೆಳಗಿನವರೆಗೆ ನಡೆದುಹೋಗೋದು. ಆದ್ರೆ ಮುಂಚೆ ಬೆಟ್ಟಕ್ಕೆ ಬಸ್ಸಲ್ಲಿ ಹೋಗ್ತಾ ಕಂಡಿದ್ದ ವೀಕ್ಷಣಾಗೋಪುರವೊಂದು ನೆನಪಾಗಿ ಅಲ್ಲಿವರೆಗಾದ್ರೂ ನಡೆದುಹೋಗ್ಬೇಕು. ಅಲ್ಲಿಂದ ಹೇಗೂ ಬರ್ತಿರೋ ಬಸ್ಸುಗಳು ಸಿಕ್ಕುತ್ತೆ. ಇಲ್ಲಾ ಆಂದ್ರೆ ವಾಪಾಸು ಹತ್ತಿಬರೋದು ಅಂತ ಅಂದ್ಕೊಂಡ್ವಿ. ಸರಿ ಅಂತ ರಸ್ತೇಲೇ ನಡೀತಾ ಸಾಗಿದ ನಮಗೆ ಮತ್ತೆ ಕೆಳಗಿಳಿಯೋ ಮೆಟ್ಟಿಲುಗಳು ಕಂಡವು. ರಸ್ತೆಯಾಚೆಯ ಮೇಲೆ ಹತ್ತೋ ಮೆಟ್ಟಿಲುಗಳಲ್ಲೇ ಬಂದಿದ್ರೆ ಇನ್ನೂ ಬೇಗ ತಿರುವಿಗೆ ಬರ್ಬಹುದಿತ್ತು ಅಂತ ಅವಾಗ ಅನಿಸಿತು.( ನಂದಿಯ ಹತ್ರ ಮೆಟ್ಟಿಲುಗಳ್ನ ಬಿಟ್ಟು ರಸ್ತೆ ಹಿಡಿದಿದ್ವಲ್ಲ). ನಡೀಬೇಕು ಅಂತ ಮುಂಚೆಯೇ ನಿಶ್ಚಯ ಮಾಡಿದ್ವಲ್ಲ. ಹಾಗಾಗಿ ಏಳು ನೂರು ಮೆಟ್ಟಿಲು ಇಳಿಯೋಕೆ ಹೊರಟೇ ಬಿಟ್ವಿ. ಚಾಮುಂಡಿಬೆಟ್ಟ ಚಾರಣ ಅಂತ ಬರೋರು ಮತ್ತೆ ಹರಕೆ ಹೊತ್ತ ಭಕ್ತರನ್ನು ಬಿಟ್ರೆ ಬೇರ್ಯಾರು ದಾರಿಯಲ್ಲಿ ಬರೋ ತರ ಕಾಣಲಿಲ್ಲ. ನಾವು ಇಳಿಯುವಾಗೆಂತೂ ಒಂದು ಪ್ರೇಮಿ ಜೋಡಿ ಬಿಟ್ರೆ ದಾರಿಯುದ್ದಕ್ಕೂ ನಮ್ಮ ಗೆಳೆಯರ ಗ್ಯಾಂಗೊಂದೇ.

ಚಾಮುಂಡಿಬೆಟ್ಟದ ಬುಡದಲ್ಲಿ ರಾಜರ ಕಾಲದಲ್ಲೋ ನಂತರವೋ ಕಟ್ಟಿಸಿದ ಹಲವು ತಂಗುದಾಣದಂತಹ ರಚನೆಗಳಿವೆ. ದೂರದಿಂದ ನೋಡಿದ ನಾವು ದೇವಸ್ಥಾನ ಅಂದ್ಕೊಂಡ್ರೂ ಹತ್ತಿರ ಹೋಗಿ ನೋಡಿದಾಗ ತಂಗುದಾಣ ಅಂತ ಗೊತ್ತಾಯ್ತು. ನಂದಿಬೆಟ್ಟಕ್ಕೆ ಬರೋ ಕುಟುಂಬಗಳು ಅಡಿಗೆ, ಊಟ ಮಾಡೋಕೆ, ರಾತ್ರೆಯಾದ್ರೆ ಅಲ್ಲೇ ಮಲಗೋಕೆ ಅನುವಾಗುವಂತೆ ಉದಾರ ಹೃದಯದಿಂದ ಕಟ್ಟಿಸಿದ ತಾಣಗಳು ಈಗ ಜನರೇ ಇಲ್ಲದೇ ಖಾಲಿ ಬಿದ್ದಿರೋದು ನೋಡಿ ಒಮ್ಮೆ ಹೃದಯ ಕಲಕಿತು. ಅಲ್ಲೇ ಮೂಲೆಯಲ್ಲೊಂದಿಷ್ಟು ತುಳಸಿ ಗಿಡಗಳು, ಸಮಾಧಿಗಳು. ಕಾಲದ ಶಿಲ್ಪಿಗಳದೋ ಮಂತ್ರಿಗಳದೋ ಇರಬಹುದು. ಹೆಚ್ಚಿನ ಮಾಹಿತಿಯಿಲ್ಲದೇ ಖಾಲಿ ಬಿದ್ದಿದ್ವು. ಹಂಗೇ ಕೆಳಗೆ ಬಂದಾಗ ಯಾವುದೋ ಪ್ರೆಸ್ ಎಂಬ ಕಾರಿನಲ್ಲಿ ಬಂದಿಳಿದ ವಿದೇಶಿಗಳು ಚಾಮುಂಡಿ ಬೆಟ್ಟನ ನಾವಿಳಿದು ಬಂದ ಮೆಟ್ಟಿಲುಗಳಲ್ಲೇ ಹತ್ತೋಕೆ ಹೊರಟಿದ್ದು ಕಾಣಿಸ್ತು !! ಅದ್ರ ಬಗ್ಗೆ ನೋ ಕಾಮೆಂಟ್ಸ್. ಕೆಳಗಿಳಿದ ನಮಗೆ ಕಾಯ್ತಾ ಇದ್ದ ಎರಡು ಆಟೋಗಳು ಕಂಡವು. ಅಂದ್ರೆ ಅಪರೂಪಕ್ಕಾದ್ರೂ ಇಲ್ಲಿ ಜನ ಬರ್ತಾರೆ ಅಂತ ಆಯ್ತು. ಅಬ್ಬಾ ಸದ್ಯ ! ಅದೇ ಆಟೋ ಹತ್ತಿ ಚಾಮುಂಡಿಬೆಟ್ಟಕ್ಕೆ ಹೋಗೋ ದಾರಿಯಲ್ಲೇ ಸ್ವಲ್ಪ ಕಡೆ ಸಿಗೋ ಮೇಣದ ಮ್ಯೂಸಿಯಂಗೆ ಹೋದೆವು.

Wax musuem
ಮೇಣದ ಮ್ಯೂಸಿಯಂ ಅಂದ್ರೆ ಲಂಡನ್ ಮೇಡಂ ಟ್ಯುಸಾಡ್ ಮ್ಯೂಸಿಯಂ ನೆನಪಾಗಬಹುದು ಕೆಲವರಿಗೆ. ಅಮಿತಾಬ್ ಬಚ್ಚನ್, ಐಶ್ವರ್ಯ ರೈ ಹೀಗೆ ಸಿನಿತಾರೆಗಳು ಅವ್ರ ಮೇಣದ ಪ್ರತಿಕೃತಿಗಳೊಂದಿಗೆ ಕೊಟ್ಟ ಪೋಸಿನ ಫೋಟೋಗಳು ಪೇಪರಲ್ಲಿ ಬಂದಿದ್ದು ನೋಡಿರಬಹುದು ನೀವು. ಇದು ಅಷ್ಟು ಚೆನ್ನಾಗಿದೆ ಅಂತ ಹೇಳಲಾಗದಿದ್ದರೂ ಇಲ್ಲಿನವರ ಶ್ರಮಕ್ಕೆ ಒಮ್ಮೆ ಶಭಾಷ್ ಅನ್ನದೇ ಇರೋಕೆ ಸಾಧ್ಯನೇ ಇಲ್ಲ. ಹಲತರದ ವಾದ್ಯಗಳು, ವಾದ್ಯತಂಡಗಳು, ಟೆಲಿಫೋನ್ಗಳು , ಪಂಜಾಬಿ, ಆದಿವಾಸಿ ಹೀಗೆ ಹಲವು ಸಂಸ್ಕೃತಿಗಳು.. ಕೆಲವಂತೂ ನಮ್ಮೆದುರೇ ಜನ ಕೂತಿದ್ದಾರೆನೋ ಅನಿಸುವಂತಿತ್ತು. ಅದನ್ನು ಹೇಳೋದಕ್ಕಿಂತಲೂ ಅಲ್ಲಿ ನೋಡಿಯೇ ಅನುಭವಿಸಬೇಕು.

ಸರಿ, ಅದನ್ನು ನೋಡಿ ಮತ್ತೆ ಮೈಸೂರಿಗೆ ವಾಪಾಸ್ಸು ಬಂದ್ವಿ. ಸಂಜೆಯಾಗುತ್ತಾ ಬಂದಿತ್ತು. ಅರಮನೆಯ ದೀಪಾಲಂಕಾರ ಶುರುವಾಗೋಕೆ ಇನ್ನೂ ಸಮಯ ಇತ್ತು. ಹಾಗಾಗಿ ಜಗನ್ಮೋಹನ ಅರಮನೆ ಅಥವಾ ಜಗನ್ಮೋಹನ ಚಿತ್ರಶಾಲೆಗೆ ಹೋಗೋಣ ಅಂತ ತೀರ್ಮಾನಿಸಿದ್ವಿ. ಜಗನ್ಮೋಹನ ಚಿತ್ರಶಾಲೆ ಅಂದ ತಕ್ಷಣ ಅಲ್ಲಿರೋ ಗಡಿಯಾರ, ರಾಜರ ಕಾಲದ ಚಿತ್ರಗಳು, ದೀಪದ ಮಹಿಳೆ ಹೀಗೆ ಹಲವು ಚಿತ್ರಗಳು ನೆನಪಾಗುತ್ತೆ. ಅಲ್ಲೆಲ್ಲೂ ಕ್ಯಾಮೆರಾ, ಮೊಬೈಲಲ್ಲಿ ಫೋಟೋ ತೆಗೆಯೋಕೆ ಅನುಮತಿ ಇಲ್ದೇ ಇರೋದ್ರಿಂದ ಚಿತ್ರ ಹಾಕೋಕೆ ಆಗ್ತಾ ಇಲ್ಲ ..  ಪ್ರತಿ ಸೆಕೆಂಡ್ ತೋರಿಸೋ ಸೈನಿಕ, ಇಪ್ಪತ್ತು ನಿಮಿಷಕ್ಕೆ ಆಗೋ ಚಲನೆ, ಪ್ರತಿ ಒಂದು ಘಂಟೆಗಾಗುವ ಸೈನಿಕರ ಮೆರವಣಿಗೆ.. ಹೀಗೆ ಆಗಿನ ಕಾಲದಲ್ಲೇ ಮುಂದುವರಿದ ತಂತ್ರಾಂಶ ನೋಡಿ ಖುಷಿಯಾಯ್ತು. ಅದು ಭಾರತದಲ್ಲ, ನಮ್ಮವರಿಗೆ ಅಂತ ತಲೆಯೆಲ್ಲಿ ಎಂಬ  ಕುಹಕವೂ ನಮ್ಮವರು ಅದಕ್ಕಿಂತ ಎಷ್ಟೋ ಮುಂದುವರಿದಿದ್ರೂ ವಿದೇಶಿಯರ ನಿರಂತರ ದಾಳಿಯಲ್ಲಿ ಅವೆಲ್ಲಾ ನಶಿಸಿದೆವು ಎಂಬ ಸ್ವಾಭಿಮಾನದ ಮಾತುಗಳೂ ಒಟ್ಟಿಗೇ ನೆನಪಾದವು. 

 ಅಲ್ಲೇ ಪಕ್ಕದಲ್ಲಿನ ಅಕ್ಕಿಕಾಳಿನ ಮೇಲಿನ ದಶಾವತಾರ ಮುಂತಾದ ಕೆತ್ತನೆಗಳೂ ಮನಸೂರೆಗೊಂಡವು. ರವಿವರ್ಮನ ಜಟಾಯುವಿನ ರೆಕ್ಕೆ ಕಡಿಯುತ್ತಿರುವ ರಾವಣನ ಚಿತ್ರ, ನಳ ದಮಯಂತಿ ಹೀಗೆ ಪ್ರಸಿದ್ದ  ಚಿತ್ರಗಳಿಂದ ಹಲವು ಇತ್ತೀಚಿಗಿನ ಪ್ರಸಿದ್ದ ಚಿತ್ರಕಾರರ ಚಿತ್ರಗಳು ನೆಲಮಹಡಿಯಲ್ಲಿವೆ. ಮೇಲ್ಮಡಿಗಳನ್ನು ಹತ್ತುತ್ತಾ ಹತ್ತುತ್ತಾ ಆಗಿನ ಕಾಲದ ವಾದ್ಯಗಳು, ಪಗಡೆಯಂತಹ ಆಟಗಳು, ಜಾಗಟೆಯಂತಹ ವಾದ್ಯಗಳು, ತಬಲಾ.. ಹೀಗೆ ಹಲವು ನಶಿಸುತ್ತಿರುವ ಸಂಸ್ಕೃತಿಗಳಿಗೆ ವೇದಿಕೆಯಂತಿದೆ. ಅಲ್ಲಿನ ಚಿತ್ರಗಳಲ್ಲಿ ಇನ್ನೊಂದು ಮರೆಯಲೇಬಾರದಂತಹ ಚಿತ್ರ ದೀಪದ ಮಹಿಳೆ. ಚಿತ್ರವನ್ನು ಕತ್ತಲೆಯಲ್ಲಿ ನೋಡಿದರೆ ನಿಜವಾಗಲೂ ಒಬ್ಬ ಮಹಿಳೆ ದೀಪ ಹೊತ್ತು ನಿಂತಂತೆಯೂ ದೀಪದ ಪ್ರಭಾವಳಿ , ನೆರಳುಗಳನ್ನು ನೋಡಿದಂತೆಯೇ ಭಾಸವಾಗುತ್ತೆ! ಅದನ್ನು ನೋಡಿ ಕೆಳಗಿಳಿದಾಗ ಮತ್ತೊಂದು ಕೋಣೆ. ಅಲ್ಲಿ ಐದು , ಹತ್ತನೇ ಶತಮಾನದ ಉತ್ಖತನದ ಕುರುಹಗಳನ್ನು ನೋಡಿ ಒಮ್ಮೆ ಮೈ ಜುಮ್ಮೆಂದಿತು. ಅಲ್ಲೇ ಮೇಲ್ಗಡೆ ಮೈಸೂರಿನ ಮಹಾರಾಜರು ಮತ್ತು ಅವರ ಆಳ್ವಿಕೆಯ ಇಸವಿಗಳಿರೋ ಚಿತ್ರಗಳೂ ಇವೆ. ಅವರಲ್ಲಿ ಹೆಚ್ಚಿನವರನ್ನು ಗುಲಾಬಿ ಹೂಗಳನ್ನು ಹಿಡಿದಂತೆಯೂ ಕೆಲವರನ್ನು ವಿಭಿನ್ನವಾಗಿಯೂ ಚಿತ್ರಿಸಲಾಗಿದೆ. ಅದೇಕೆಂದು ಅಲ್ಲಿನ ಮೇಲ್ವಿಚಾರಕರಲ್ಲಿ ಪ್ರಶ್ನಿಸಿದಾಗ ಸೂಕ್ತ ಉತ್ತರ ಸಿಗಲಿಲ್ಲ. ನಿಮ್ಮಲ್ಯಾರಾದ್ರೂ ಇತಿಹಾಸಜ್ನ ಮಿತ್ರರಿದ್ದರೆ ಬಗೆಗಿನ ಮಾಹಿತಿ ಹಂಚಿಕೊಳ್ಳಬಹುದು. ಅಲ್ಲಿನ ಮತ್ತೊಂದು ಮನಸೂರೆಗೊಳ್ಳುವ ಅಂಶ ಅರವತ್ತು ಸಂವತ್ಸರಗಳ ಬಗೆಗಿನ ಸ್ತೋತ್ರಗಳು ಮತ್ತು  ಸಂವತ್ಸರದ ಬಗೆಗಿನ ಚಿತ್ರಗಳು. ಇದರಲ್ಲಿ ಕೆಲವು ಸಂವತ್ಸರಗಳು ಕಾಣೆಯಾಗಿದ್ದವೆನ್ನೋದು ಮತ್ತೊಂದು ಬೇಸರದ ಸಂಗತಿ. ಇಲ್ಲಿ ಎಲ್ಲವನ್ನೂ ಹಾಕಲು ಜಾಗವಿಲ್ಲದೇ ಬೇರೆಡೆ ಸ್ಥಳಾಂತರಿಸಲಾಗಿದೆ  ಎಂಬ ಮಾತು ಕೇಳಿಬಂದರೂ ಅದು "ಎಲ್ಲಿ" ಎಂಬ ಖಚಿತ ಮಾಹಿತಿ ಸಿಗಲಿಲ್ಲ. ಮೈಸೂರು ಪ್ರಧಾನ ಅರಮನೆ ಎಂದು ಕೆಲವರು ಹೇಳುತ್ತಾರಾದ್ರೂ ಅರಮನೆ ನೋಡೋಕೆ ಆಮೇಲೆ ಹೋದ್ರೂ ಅಲ್ಲಿ ಅವು ಕಾಣಲಿಲ್ಲ. ಇನ್ನೆಲ್ಲಾದ್ರೂ ನೋಡಿದ್ರೆ, ನೀವು ಮಾಹಿತಿ ಹಂಚಿಕೋಬೋದು.

Clock tower
ಆಷ್ಟೊತ್ತಿಗೆ ಸಂಜೆಯಾಗುತ್ತಾ ಬಂದಿದ್ರೂ ಅರಮನೆಯಲ್ಲಿ ಇನ್ನೂ ದೀಪಾಲಂಕಾರ ಶುರುವಾಗಿರಲ್ಲ ಅನ್ನೋ ಮಾತು ಕೇಳಿಬಂತು. ಸರಿ, ಸೇಂಟ್ ಫಿಲೋಮಿನಾ ಚರ್ಚ್ ನೋಡ್ಕೊಂಡು ಬರೋಣ ಅಂತ ಅಲ್ಲಿಗೆ ಹೊರಟ್ವಿ. ದಾರಿಯಲ್ಲಿ ನೋಡಿದ ಮೈಸೂರಿನ ಪ್ರಸಿದ್ದ ಗಡಿಯಾರದ ಗೋಪುರ, ಸೇಂಟ್ ಫಿಲೋಮಿನಾ ಚರ್ಚು, ಅಲ್ಲಿಗೆ ಹೋಗೋ ದಾರಿಯಲ್ಲೆಲ್ಲಾ ಕಂಡ ಲೈಟುಗಳ ಸೌಂದರ್ಯವನ್ನು ಹೇಳೋದಕ್ಕಿಂತ ಅಲ್ಲಿ ಹೊಗಿ ಸವಿಯೋದೇ ಮೇಲು. ಕೊನೆಗೂ ಅರಮನೆಗೆ ಬಂದೆವು.






 

 ಅಬ್ಬಾ ಎಂತಹಾ ದೀಪಾಲಂಕಾರ.. ಸೂಪರ್ರಪ್ಪ.. ಜಗಮಗಿಸುತ್ತಿದ್ದ ಅರಮನೆಯ ಬಗ್ಗೆ ಹೇಳೋದಕ್ಕಿಂತ ಸೌಂದರ್ಯದ ಕೆಲ ಚಿತ್ರಗಳನ್ನು ಹಾಕೋದೇ ಮೇಲು.. ರಾತ್ರೆಯಲ್ಲಿ ಅಲ್ಲಿ ನಡೆಯುವ ಸಂಗೀತಗೋಷ್ಟಿಗಳ ಸಂಗೀತ ಸುಧೆಯ ಮಧ್ಯೆ ಬೆಳಕಿನ ಸವಿ ಸವಿಯೋದೆ ಒಂದು ಸ್ವರ್ಗ ಸಮ ಭಾವ.ಅರಮನೆಯ ದೀಪಾಲಂಕಾರ ನೋಡುತ್ತಿದ್ದ ನಮಗೆ ಹೊರಬರಲೇ ಮನಸ್ಸಿಲ್ಲ. ಆದ್ರೆ ಏನು ಮಾಡೋದು. ಬರಲೇಬೇಕಲ್ಲ, ಒಲ್ಲದ ಮನಸ್ಸಿಂದ ಹೊರಬಂದು ಸ್ನೇಹಿತನ ನೆಂಟರ ಮನೆ ಸೇರಿದೆವು.







ಮಾರನೆಯ ದಿನ ಬೆಳಗಾಯಿತು. ಅರಮನೆಯನ್ನು ರಾತ್ರೆ ನೋಡಿದ್ದ ನಾವು ಹಗಲು ಅದರ ಒಳಗೆ ನೋಡೋಕೆ ಹೊರಟೆವು.. ದಸರಾ ಅಂದ್ರೆ ಹಗಲೂ ರಾತ್ರಿ ಪ್ರತಿದಿನ ಸಂಗೀತ ಗೋಷ್ಟಿ ನಡೆಯುತ್ತೆ ಅರಮನೆ ಪ್ರಾಂಗಣದಲ್ಲಿ. ನಾವು ಹೋಗಿದ್ದ ದಿನ ಹಲವು ಕಲಾವಿದರ(ನೂರು ಎಂದು ನೆನಪು) ತಬಲಾವಾದನ ಕಾರ್ಯಕ್ರಮ ನಡೀತಿತ್ತು. ಅಂಬಾರಿ, ದರ್ಬಾರ್ ಹಾಲ್, ಹೀಗೆ ನೂರೆಂಟು ಸೌಂದರ್ಯದ ಖನಿ ಅರಮನೆಯ ಸೌಂದರ್ಯವನ್ನು ಕಣ್ಣುಗಳಲ್ಲಿ ತುಂಬಿಕೊಳ್ಳಲಾಗದಿದ್ದರೂ ತುಂಬಿಕೊಳ್ಳೋ ಪ್ರಯತ್ನದಲ್ಲಿ ಹೊರಬಂದೆವು.  


ಆಮೇಲೆ ಅಲ್ಲೇ ಪಕ್ಕದಲ್ಲಿದ್ದ ದೇಗುಲವನ್ನೂ ಪಕ್ಕದಲ್ಲಿದ್ದ ಫಲಪುಷ್ಪ ಪ್ರದರ್ಶನವನ್ನೂ ನೋಡಿದೆವು. ಮೈಸೂರಿನ ಟಾಂಗಾಗಾಡಿಗಳು, ಮೈಸೂರು ಮೃಗಾಲಯಗಳು, ಕೆ ಆರೆಸ್ಸು ಅಲ್ಲೇ ಪಕ್ಕದ ನಂಜನಗೂಡು ಹೀಗೆ ಸುಮಾರಷ್ಟು ನೋಡುವಂತಹ ಸ್ಥಳಗಳಿದ್ರೂ ದಿನವೇ ಬೆಂಗಳೂರಿಗೆ ಮರಳೋ ಅನಿವಾರ್ಯತೆ ಇದ್ದಿದ್ರಿಂದ ಒಲ್ಲದ ಮನಸ್ಸಿಂದ ಬಸ್ಸು ಹತ್ತಿದ್ವಿ. ಹಿಂದೊಮ್ಮೆ ಇವುಗಳಿಗೆಲ್ಲಾ ಹೋಗಿದ್ರೂ ಮತ್ತೆ ಮತ್ತೆ ಹೋಗೋ ಮನಸ್ಸಿಂದ.. ಮತ್ತೊಮ್ಮೆ ದಸರಾ ಸವಿ ಸವಿಯೋ ನಿರೀಕ್ಷೆಯಿಂದ...

ನಿಮ್ಮ ಪ್ರಶಸ್ತಿ.